ಬಂದ್ ಇರಲಿ, ಲಾಕ್ ಡೌನ್ ಇರಲಿ. ದಿನ ಪತ್ರಿಕೆ ಹಾಕೋರು ಮಳೆ ಚಳಿ ಗಾಳಿ ಲೆಕ್ಕಿಸದೇ ಅದೇನೇ ಕಷ್ಟಗಳಿದ್ರೂ ನಾವು ಬೆಡ್ನಿಂದ ಎದ್ದೇಳುವಷ್ಟರಲ್ಲಿ ಹಳ್ಳಿಯಿಂದ ದಿಲ್ಲಿವರೆಗಿನ ಸುದ್ದಿಗಳನ್ನ ನಮ್ಮ ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸ ಮಾಡ್ತಾರೆ. ಆದರೆ ಅವರ ಸಮಸ್ಯೆಗಳು ಮಾತ್ರ ಬೆಟ್ಟದಷ್ಟು. ಹೀಗೆ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದವರೂ ಸದ್ಯ ಕಂಗಾಲಾಗಿದ್ದಾರೆ.
ದಿನ ಬೆಳಗಾದ್ರೆ ಸಾಕು ಬಿಸಿ ಬಿಸಿ ಕಾಫಿ ಜೊತೆಗೆ ದಿನ ಪತ್ರಿಕೆ ಓದುವುದರೊಂದಿಗೆ ಬಹುತೇಕರ ದಿನಚರಿ ಶುರುವಾಗುತ್ತೆ. ತಮ್ಮ ಓದುಗರು ದಿನನಿತ್ಯದ ಸುದ್ದಿಗಳನ್ನ ಓದುವುದನ್ನ ಮಿಸ್ ಮಾಡದಿರಲಿ ಅಂತ ಪತ್ರಿಕಾ ವಿತರಕರು ಹಾಗೂ ಪೇಪರ್ ಹಾಕುವ ಬೀಟ್ ಬಾಯ್ಸ್ ಅದೆಷ್ಟೇ ಕಷ್ಟವಾದ್ರೂ ಸರಿಯಾದ ಟೈಮ್ಗೆ ಪೇಪರ್ ಹಾಕ್ತಾರೆ. ಇದರಲ್ಲಿ ಸಿಗೋ ಬಿಡಿಗಾಸಲ್ಲೇ ಜೀವನ ನಡೆಸ್ತಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳೇ ಪೇಪರ್ ಹಾಕಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿಕೊಳ್ತಾರೆ. ಆದರೆ ಕೋವಿಡ್ನಿಂದ ಜೀವನ ನಡೆಸೋದೆ ಕಷ್ಟವಾಗಿದೆ ಅಂತಿದಾರೆ ಪತ್ರಿಕೆ ವಿತರಕರು. ಇದಕ್ಕೆ ಕಾರಣ ಆ ವದಂತಿ.
ದಿನ ಪತ್ರಿಕೆ ವಿತಕರಿಗೆ ಕೋವಿಡ್ ಮೂರನೇ ಅಲೆ ಎಫೆಕ್ಟ್ ತಟ್ಟಿದೆ. ನ್ಯೂಸ್ ಪೇಪರ್ ಮೂಲಕ ಕೊರೊನಾ ಸೋಂಕು ಹರಡುತ್ತೆ ಅಂತ ಹಿಂದೆ ಕೆಲ ವದಂತಿ ಹರಡಿದ್ದರಿಂದ ಪತ್ರಿಕೆ ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕಿದ್ರು. ಈಗ ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ ಮತ್ತೆ ದಿನ ಪತ್ರಿಕೆಗಳ ಬೇಡಿಕೆಯಲ್ಲಿ ಕುಸಿತ ಕಂಡಿದೆ. ಈ ಹಿನ್ನೆಲೆ ಗ್ರಾಹಕರಿಗೆ ಕರ್ನಾಟಕ ರಾಜ್ಯ ಪತ್ರಿಕೆ ವಿತರಕರ ಒಕ್ಕೂಟ ಮನವಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ WHO ನೇ ದಿನ ಪತ್ರಿಕೆಗಳಿಂದ ಕೋವಿಡ್ ಸೋಂಕು ಹರಡಲ್ಲ ಅಂತ ಸ್ಪಷ್ಟಪಡಿಸಿದೆ. ಇದೆ ವೃತ್ತಿಯನ್ನ ನಂಬಿ ಸುಮಾರು 3 ವರೆ ಲಕ್ಷ ಕುಟುಂಬಗಳಿವೆ. ಹೀಗಾಗಿ ಓದುಗರು ದಯವಿಟ್ಟು ಪತ್ರಿಕೆ ಕೊಂಡುಕೊಳ್ಳಿ ಅಂತ ಮನವಿ ಮಾಡಿದೆ. ನಿತ್ಯ ಹಾಲು, ಹಣ್ಣು, ತರಕಾರಿ ಕೊಂಡುಕೊಳ್ಳುವಂತೆ ನ್ಯೂಸ್ ಪೇಪರ್ ಖರೀದಿಸಲು ಗ್ರಾಹಕರಿಗೆ ಮನವಿ ಮಾಡಿದೆ ಎಂದರು ರಾಜ್ಯ ಪತ್ರಿಕೆ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಅವರು.