ಬೆಂಗಳೂರು: ಎರಡು ಸಿಮೆಂಟ್ ಲಾರಿಗಳು ಡಿಕ್ಕಿಯಾಗಿ, ಹೊತ್ತಿಕೊಂಡ ಬೆಂಕಿಯಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಭುಕ್ತಿ ಡಾಬಾ ಬಳಿ ಸಂಭವಿಸಿದ ಅಪಘಾತದಲ್ಲಿ ಎರಡೂ ಸಿಮೆಂಟ್ ಸಾಗಣೆ ಲಾರಿಗಳು ಹೊತ್ತಿ ಉರಿದವು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಓರ್ವ ಚಾಲಕನನ್ನು ಸ್ಥಳೀಯರು ರಕ್ಷಿಸಿದರು. ಆದರೆ ಮತ್ತೋರ್ವ ಚಾಲಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ. ಅಪಘಾತ ಮತ್ತು ಬೆಂಕಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸುಮಾರು 3 ಕಿಮೀಯಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸರ ಹರಸಾಹಸಪಟ್ಟರು.
ಎರಡೂ ಲಾರಿಗಳು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದವು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಒಂದು ಲಾರಿಯನ್ನು ಮತ್ತೊಂದು ಲಾರಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಲಾರಿಯೊಂದು ಹೊತ್ತಿ ಉರಿದಿದೆ. ಚಾಲಕನ ಸೀಟ್ನಲ್ಲೇ ಮೃತದೇಹ ಸಿಲುಕಿದ್ದು, ಅಪಘಾತದ ರಭಸಕ್ಕೆ ಎರಡೂ ಲಾರಿಗಳು ನಜ್ಜುಗುಜ್ಜಾಗಿವೆ. ಬೆಂಕಿ ನಂದಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಯತ್ನಿಸಿದರು.
ತುಮಕೂರು: ಇಲ್ಲಿನ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಬಸ್ ದುರಂತ ಪ್ರಕರಣದ ಬಳಿಕ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ವೈ.ಎನ್. ಹೊಸಕೋಟೆಯಿಂದ 9 KSRTC ಬಸ್ ಸೇವೆ ಆರಂಭ ಮಾಡಲಾಗಿದೆ. ವೈ.ಎನ್. ಹೊಸಕೋಟೆ- ಪಾವಗಡ ಮಧ್ಯೆ 9 ಬಸ್ಗಳ ಸಂಚಾರ ಶುರುವಾಗಿದೆ. ಮೊದಲು ಈ ಮಾರ್ಗದಲ್ಲಿ 2 ಬಸ್ ಮಾತ್ರ ಸಂಚರಿಸುತ್ತಿತ್ತು. ಇದೀಗ ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ 7 ಬಸ್ ಸಂಚಾರ ಆರಂಭವಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಮಧ್ಯೆ ಬಸ್ ಸಂಚಾರ ಶುರು ಮಾಡಲಾಗಿದೆ.