ಬೆಳಗಾವಿ: ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಅನುಕೂಲ ಕಲ್ಪಿಸಲು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳ ಜನ ಜಾಗೃತಿಗೆ ಬೀದಿ ನಾಟಕ ಕಾರ್ಯಕ್ರಮಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ರಾಜ್ಯದ 4,500 ಕಲಾವಿದರನ್ನು ದಶಕಗಳಿಂದಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳ ಯೋಜನೆಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಬಳಸಿಕೊಳ್ಳಲಾಗುತ್ತಿತ್ತು. ಬೀದಿ ನಾಟಕ ಕಲೆಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದೆವು. ಆದರೆ, ಸದ್ಯ ಕೆಲವು ಇಲಾಖೆಗಳು ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನೇ ನಿಲ್ಲಿಸಿವೆ.
ಇದರಿಂದ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ. ಕೊರೊನಾ ವೈರಸ್ ಸಂದರ್ಭದಲ್ಲಿ ಕೆಲಸವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.
‘ಬೀದಿ ನಾಟಕ ಕಾರ್ಯಕ್ರಮಗಳನ್ನು ಕೂಡಲೇ ಆರಂಭಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ಘಟಕದ ಭರತ ಕಲಾಚಂದ್ರ, ರಾಮಚಂದ್ರ ಕಾಂಬಳೆ, ಮಾರುತಿ ಕಾಮಗೌಡ, ಮಿಲೀಂದ್ರ ಸಂಗಣ್ಣವರ, ಪ್ರಶಾಂತ ಕಾಬಂಳೆ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ್ಲ, ಮಾರುತಿ ಕಮತೆ ಇದ್ದರು.