ಬೆಳಗಾವಿ: ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್ ಬ್ಯಾಂಡ್ಗಳನ್ನು ನುಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
‘ಈ ವೃತ್ತಿಯನ್ನು ಸಾವಿರಾರು ಮಂದಿ ಅವಲಂಬಿಸಿದ್ದೇವೆ. ಕೋವಿಡ್-19 ಲಾಕ್ಡೌನ್ನಿಂದಾಗಿ ಸಭೆ, ಸಮಾರಂಭ, ಮದುವೆ, ಜಯಂತಿ, ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಹಲವು ತಿಂಗಳವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ದುಡಿಮೆ ಇಲ್ಲದೆ, ಗಳಿಕೆಯೂ ಇಲ್ಲದೆ ನಾವು ಬಹಳ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರದ ಯಾವುದೇ ಸಹಾಯವನ್ನೂ ಬಯಸದೆ ಕಾಯಕವನ್ನೇ ನಂಬಿ ಬದುಕುತ್ತಿದ್ದೆ ನಮಗೆ ಕೊರೊನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟು ಭಾರಿ ಬರೆ ಎಳೆದಿದೆ.
ಈಗಲೂ ಕೆಲಸ ಇಲ್ಲದಂತಾಗಿದೆ. ಪರಿಣಾಮ ಜೀವನ ನಿರ್ವಹಣೆಯೇ ದುಸ್ತರವಾಗಿದೆ’ ಎಂದು ತಿಳಿಸಿದರು.
‘ಈಗ ಮದುವೆ ಸಮಾರಂಭಗಳಿಗೆ ಅವಕಾಶ ಕೊಡಲಾಗಿದೆ. ಆ ವೇಳೆಯಲ್ಲಿ ಮಂಗಳವಾದ್ಯ ಮತ್ತು ಬ್ರಾಸ್ ಬ್ಯಾಂಡ್ಗಳನ್ನು ನುಡಿಸಲು ಅನುಮತಿ ನೀಡಬೇಕು. ಈ ಮೂಲಕ ನಮಗೆ ಕೆಲಸ ದೊರೆಯುವಂತೆ ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಪರಶುರಾಮ ವಾಜಂತ್ರಿ, ಉಪಾಧ್ಯಕ್ಷ ಬಸವರಾಜ ಭಜಂತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ ಪರಶುರಾಮ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಭಜಂತ್ರಿ, ಉಪ ಕಾರ್ಯದರ್ಶಿ ಹಣಮಂತ ಭಜಂತ್ರಿ ಹಾಗೂ ಖಜಾಂಚಿ ಅಶೋಕ ಭಜಂತ್ರಿ ನೇತೃತ್ವ ವಹಿಸಿದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??