ಬೆಂಗಳೂರು,- ಅಕ್ಟೋಬರ್ 1ರಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.
ದಕ್ಷಿಣ ಮತ್ತು ಉತ್ತರ ಭಾರತದ ವಾಣಿಜ್ಯ ಮಂಡಳಿಗಳು ಕೇಂದ್ರ ಸರ್ಕಾರಕ್ಕೆ ಚಿತ್ರಮಂದಿರಗಳನ್ನು ತೆರೆಯುವ ಸಂಬಂಧ ಮನವಿ ಸಲ್ಲಿಸಿದ್ದು, ಇದಕ್ಕೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ನಡೆಯದೇ ಸಂಪೂರ್ಣ ಸ್ಥಗಿತವಾಗಿದೆ. ಚಿತ್ರೀಕರಣಕ್ಕೆ ಇತ್ತೀಚೆಗೆ ಅನುಮತಿ ದೊರೆತಿದ್ದರೂ ಚಿತ್ರ ಬಿಡುಗಡೆಗೊಳ್ಳದಿದ್ದರೆ ಯಾವುದೇ ಪ್ರಯೋಜನವಿಲ್ಲ.
ಹಾಗಾಗಿ ಚಿತ್ರಮಂದಿರಗಳನ್ನು ತೆರೆಯುವುದು ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಇತರೆ ಎಲ್ಲಾ ಕ್ಷೇತ್ರಗಳಿಗೂ ಸರ್ಕಾರ ಅನುಮತಿ ನೀಡಿದೆ. ಚಿತ್ರಮಂದಿರ ತೆರೆಯಲು ಮಾತ್ರ ಇನ್ನು ಅವಕಾಶ ಕಲ್ಪಿಸಿಲ್ಲ. ಇದರಿಂದ ಈ ಉದ್ಯಮದವರಿಗೆ ಆಗಿರುವ ಅನಾನುಕೂಲವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.