ಬೆಂಗಳೂರು: ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಬೆಂಗಳೂರಿನ ಸುಂಕದಕಟ್ಟೆಯ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೊರ ರಾಜ್ಯದಲ್ಲಿ ಸಿಲುಕಿದ್ದ ಬೆಂಗಳೂರಿಗರನ್ನ ಮಧ್ಯರಾತ್ರಿ ನಗರಕ್ಕೆ ಕರೆದುಕೊಂಡು ಬರುವುದನ್ನು ವಿರೋಧಿಸಿ ಸುಂಕದಕಟ್ಟೆಯ ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಸರ್ಕಾರ ವಿದ್ಯಾರ್ಥಿಗಳನ್ನ ಇದೀಗ ಬೆಂಗಳೂರಿಗೆ ಕಳುಹಿಸಿದೆ.
ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳನ್ನ ಸುಂಕದಕಟ್ಟೆಯ ಸರ್ಕಾರಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಮುಂದಾಗಿದೆ. ಗುರುವಾರ ಸಂಜೆಯೇ ಪಾಲಿಕೆ ಅಧಿಕಾರಿಗಳು, ಪೊಲೀಸರು ಸ್ಥಳ ಪರಿಶೀಲನೆ ಮಾಡಿ ತೆರಳಿದ್ದರು. ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಬೆಡ್ ವ್ಯವಸ್ಥೆಯನ್ನು ಮಾಡಿದ್ದು, ಔಷಧಿಯನ್ನು ಸಿಂಪಡಣೆ ಕೂಡ ಮಾಡಲಾಗಿದೆ.
ಅಧಿಕಾರಿಗಳು ಹೋಗುತ್ತಿದ್ದಂತೆ ಸುಂಕದಕಟ್ಟೆಯಲ್ಲಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಏರಿಯಾದಲ್ಲೇ ಕ್ವಾರಂಟೈನ್ ಏಕೆ ಮಾಡಬೇಕು. ಈ ಹಾಸ್ಟೆಲ್ ಪಕ್ಕದಲ್ಲಿಯೇ ಮನೆಗಳು ಇರುವುದರಿಂದ ವಯೋವೃದ್ಧರು, ಮಕ್ಕಳಿದ್ದಾರೆ. ಜೊತೆಗೆ ಜನನಿಬೀಡದಲ್ಲಿ ಕ್ವಾರಂಟೈನ್ ಮಾಡುವುದು ಸರಿಯಿಲ್ಲ. ಬೆಂಗಳೂರಿನಲ್ಲಿ ಅನೇಕ ಹೋಟೆಲ್ಗಳಿವೆ, ಅಲ್ಲಿ ಅವರಿಗೆ ಕ್ವಾರಂಟೈನ್ ಮಾಡಿ. ಹೀಗಾಗಿ ಇಲ್ಲಿ ಕ್ವಾರಂಟೈನ್ ಮಾಡಿದರೆ ಕಷ್ಟ ಆಗುತ್ತೆ ಅಂತ ಸ್ಥಳೀಯರು ವಿರೋಧಿಸುತ್ತಿದ್ದಾರೆ.