ಬೆಂಗಳೂರು,ಜೂ.8-ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿ ಫಾರಂ ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಸುಮಾರು 50 ಮಂದಿ ಖರ್ಗೆ ಅವರ ಬಿ ಫಾರಂಗೆ ಸಹಿ ಹಾಕಿದರು.
ಐದು ನಾಮಪತ್ರಗಳನ್ನು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ಕುಮಾರ್ ಪರಿಶೀಲನೆ ನಡೆಸಿ ಎಲ್ಲವೂ ಸರಿಯಿದೆ ಎಂದು ಖಾತ್ರಿಯಾದ ಬಳಿಕ ಖರ್ಗೆ ಅವರು ಹಿರಿಯ ನಾಯಕರ ಜೊತೆ ವಿಧಾನಸೌಧಕ್ಕೆ ತೆರಳಿ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಖರ್ಗೆ ಅವರು ರಾಜ್ಯಸಭೆಗೆ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪಕ್ಷದ ಅಧ್ಯಕ್ಷನಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಮೊದಲನೇ ಬಾರಿ ಡಿ ಫಾರಂಗೆ ಸಹಿ ಹಾಕುತ್ತಿದ್ದೇನೆ. ಅದರಲ್ಲೂ ಖರ್ಗೆ ಅವರಿಗೆ ಸಹಿ ಹಾಕುತ್ತಿರುವುದು ಬಹಳ ಸಂತಸ ತಂದಿದೆ ಎಂದರು.
50 ವರ್ಷದ ರಾಜಕಾರಣದಲ್ಲಿ ಖರ್ಗೆ ಅವರು ಸಾಧಿಸಿದ್ದು ಬಹಳಷ್ಟು. ಅವರ ಅನುಭವಕ್ಕೆ ಸ್ಥಾನಮಾನಗಳು ದೊಡ್ಡದಲ್ಲ. ಕೇಳದಿದ್ದರೂ ರಾಜ್ಯಸಭಾ ಸ್ಥಾನಮಾನ ನೀಡುವ ಮೂಲಕ ಹೈಕಮಾಂಡ್ ಸೂಕ್ತ ಗೌರವ ಸಲ್ಲಿಸಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಖರ್ಗೆ ಅವರು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸುವ ಮುನ್ನ ಕಾಂಗ್ರೆಸ್ ಹೈಕಮಾಂಡ್ ಎಲ್ಲರ ನಾಯಕರ ಜೊತೆ ಸಮಾಲೋಚನೆ ನಡೆಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೂರವಾಣಿಯಲ್ಲಿ ನನ್ನ ಜೊತೆ ಮಾತನಾಡಿದ್ದರು. ಖರ್ಗೆ ಅವರು ಅಭ್ಯರ್ಥಿಯಾಗುವುದೇ ಆದರೆ ಯಾರ ಕಡೆಯಿಂದಲೂ ಆಕ್ಷೇಪಣೆ ಬರುವುದಿಲ್ಲ ಎಂದು ತಿಳಿಸಿದರು.
ನಂತರ ಶಾಸಕಾಂಗ ಸಭೆ ನಡೆಯಿತು. ಒಂದು ವೇಳೆ ರಾಜ್ಯಸಭಾ ಚುನಾವಣೆಗೆ ನಡೆಸಿದಾಗ ಮತಗಳನ್ನು ಯಾವ ರೀತಿ ಹಂಚಿಕೆ ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಾಯಿತು. ದೇವೇಗೌಡರು ಜೆಡಿಎಸ್ನಿಂದ ಅಭ್ಯರ್ಥಿಯಾಗಿದ್ದೇ ಆದರೆ ಮೂರನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುವುದಿಲ್ಲ. ಹಾಗಾಗಿ ಅವಿರೋಧ ಆಯ್ಕೆಯಾಗಬಹುದು. ನಾಮಪತ್ರ ಸಲ್ಲಿಸುವುದಕ್ಕೆ ನಾಳೆಯವರೆಗೂ ಕಾಲಾವಕಾಶವಿದೆ.
ಹೆಚ್ಚುವರಿ ಅಭ್ಯರ್ಥಿಗಳು ಕಣಕ್ಕಿಳಿದರೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರು ಪಕ್ಷ ನಿರ್ಧರಿಸಿದ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಹಿರಿಯ ನಾಯಕರು ಮನವಿ ಮಾಡಿದರು.