ಬೆಂಗಳೂರು: ಸತ್ತ ಮೇಲೆಯೂ ಕೆಲಸದವರ ಪಾಲಿಗೆ ಮತ್ತಪ್ಪ ರೈ ದಾರಿ ದೀಪವಾಗಿದ್ದಾರೆ. ಮನೆಗೆಲಸ, ತೋಟ, ಹಾಗೂ ಕಾರು ಚಾಲಕರು, ಗನ್ ಮ್ಯಾನ್ ಗಳಿಗೆ ಸೈಟ್ ಮತ್ತು ಹಣ ನೀಡಿದ್ದಾರೆ.
ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ ಸೇರಬೇಕು? ಸಂಘಟನೆ ಜವಾಬ್ದಾರಿ ಯಾರು ಹೊತ್ತುಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮುತ್ತಪ್ಪ ರೈ ತಮ್ಮ ವಕೀಲ ನಾರಾಯಣ ಸ್ವಾಮಿ ಬಳಿ ವಿಲ್ ಮಾಡಿಸಿದ್ದು ಈಗ ಲಭ್ಯವಾಗಿದೆ.
ಆಸ್ತಿ ಎಷ್ಟಿದೆ?
ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.
ಹಂಚಿಕೆ ಹೇಗೆ?
ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.
ಕೆಲಸಗಾರರಿಗೆ ಸೈಟ್:
ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದಾರೆ. ತಂದೆಯ ಸೂಚನೆಯಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದಾರೆ.
ಎರಡನೇ ಪತ್ನಿಗೂ ಹಂಚಿಕೆ:
ವಿಲ್ ನಲ್ಲಿ ಈಗಾಗಲೇ ಎರಡನೇ ಪತ್ನಿ ಅನುರಾಧಾಗೆ ಆಸ್ತಿ ಹಂಚಿಕೆ ಮಾಡಿರುವುದಾಗಿ ಮುತ್ತಪ್ಪ ರೈ ತಿಳಿಸಿದ್ದಾರೆ. ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್ ನಲ್ಲಿ ಉಲ್ಲೇಖವಾಗಿದೆ.
ಸಂಘಟನೆ ಹೊಣೆ ಯಾರಿಗೆ?
ಜಯ ಕರ್ನಾಟಕ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಹೇಳಿರುವ ಮುತ್ತಪ್ಪ ರೈ ಈ ಸಂಘಟನೆಯ ಜವಾಬ್ದಾರಿಯನ್ನು ಚಿಕ್ಕಮಗ ರಿಕ್ಕಿ ರೈಗೆ ನೀಡಿದ್ದಾರೆ. ಜಗದೀಶ್ ಸಂಘಟನೆಯ ಅಧ್ಯಕ್ಷತೆಯನ್ನು ನೋಡಿಕೊಳ್ಳಬೇಕು. ಮುಂದೆ ಈ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಲ್ಲಿ ರೈ ಮನವಿಮಾಡಿರುವ ವಿಚಾರ ವಿಲ್ ನಲ್ಲಿ ಉಲ್ಲೇಖವಾಗಿದೆ.
ವಿದೇಶದಲ್ಲಿ ಮುತ್ತಪ್ಪ ರೈ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ವಿಲ್ ನಲ್ಲಿ ವಿದೇಶದ ಆಸ್ತಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಮಗನ ವ್ಯವಹಾರ ಬಿಟ್ಟರೆ ರೈಗೆ ಯಾವುದೇ ಆಸ್ತಿ ಇಲ್ಲ. ಎರಡನೇ ಹೆಂಡತಿ ಅನುರಾಧಾಗೂ ಮುತ್ತಪ್ಪ ರೈ ಮಕ್ಕಳಿಗೂ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರುತ್ತಾರೆ. ಆಸ್ತಿ ವಿಚಾರವಾಗಿ ಅನುರಾಧ ರೈ ಕೇಸ್ ಹಾಕುತ್ತಾರೆ ಎಂಬ ಸುದ್ದಿಗಳೆಲ್ಲ ಸುಳ್ಳು ಎಂಬ ವಿಚಾರ ಈಗ ಬಹಿರಂಗವಾಗಿದೆ.