ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಹಾಗೂ ಆಮಿಷದ ರಾಜಕಾರಣದ ಸದ್ದು ಮತ್ತೆ ಜೋರಾಗಿದೆ. ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ, ಪಕ್ಷದ ಕೆಲವು ಶಾಸಕರಿಗೆ ಅನ್ಯ ಪಕ್ಷಗಳಿಂದ ಆಮಿಷದ ಕರೆಗಳು ಬರುತ್ತಿರುವ ಸ್ಪೋಟಕ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಿದ್ದಾರೆ.
ಪ್ರಮುಖವಾಗಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೂ ಇಂತಹದ್ದೇ ಕರೆ ಬಂದಿರುವ ಅಂಶವನ್ನು ಸಿಎಂ ಸಭೆಯ ಗಮನಕ್ಕೆ ತಂದಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, ನಿಮ್ಮಲ್ಲಿ ಅನೇಕರಿಗೆ ಜೆಡಿಎಸ್ ನಾಯಕರ ಕಡೆಯಿಂದ ಆಮಿಷದ ಕರೆಗಳು ಬಂದಿರಬಹುದು. ಆದರೆ ಯಾವುದೇ ಕಾರಣಕ್ಕೂ ಅವರ ಆಮಿಷಗಳಿಗೆ ಬಲಿಯಾಗಬೇಡಿ. ಪಕ್ಷದಲ್ಲಿ ಪ್ರತಿಯೊಬ್ಬರ ಚಲನವಲನದ ಮೇಲೂ ನಾವು ಹದ್ದಿನ ಕಣ್ಣಿಟ್ಟಿದ್ದೇವೆ” ಎಂದು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಶಾಸಕರ ಮತವೂ ಅತ್ಯಂತ ಅಮೂಲ್ಯವಾಗಿದ್ದು, ಸಣ್ಣ ತಪ್ಪುಗಳಿಗೂ ಆಸ್ಪದ ನೀಡಬಾರದು. ಪಕ್ಷ ಯಾರಿಗೆ ಮತ ಚಲಾಯಿಸಲು ಸೂಚಿಸುತ್ತದೆಯೋ, ಅವರಿಗೇ ಮತ ನೀಡಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವನ್ನು ಶಾಸಕರು ಹಗುರವಾಗಿ ಪರಿಗಣಿಸಬಾರದು ಎಂದು ಡಿಕೆಶಿ ಎಚ್ಚರಿಸಿದ್ದಾರೆ. “ಎಸ್ಐಆರ್ ನಮಗೆ ಸವಾಲು ಹಾಗೂ ಅವಕಾಶ ಎರಡನ್ನೂ ನೀಡಿದೆ. ಈ ವಿಚಾರದಲ್ಲಿ ಶಾಸಕರು ಹೆಚ್ಚು ಜಾಗೃತರಾಗಿರಬೇಕು. ಬೇರೆಲ್ಲಾ ಕೆಲಸಗಳಿಗಿಂತ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿ. ಒಂದು ವೇಳೆ ಮೈಮರೆತರೆ ಮುಂದೆ ನಾವೆಲ್ಲರೂ ಮನೆಯಲ್ಲಿ ರೆಸ್ಟ್ ಮಾಡಬೇಕಾಗಬಹುದು ಎಂದು ಶಾಸಕರಿಗೆ ಗಂಭೀರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸಭೆಯಲ್ಲಿ ಶಾಸಕರಲ್ಲಿ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ನಾನು ಮತ್ತು ಸಿದ್ದರಾಮಯ್ಯ ಅವರು ಸಂಪೂರ್ಣ ಒಗ್ಗಟ್ಟಿನಿಂದ ಇದ್ದೇವೆ. ವಿರೋಧ ಪಕ್ಷಗಳು ಎಷ್ಟೇ ಪ್ರಚೋದನೆ ನೀಡಿದರೂ ನಮ್ಮ ಒಗ್ಗಟ್ಟನ್ನು ಒಡೆಯಲು ಸಾಧ್ಯವಾಗಲಿಲ್ಲ. ನಮ್ಮ ನಡುವಿನ ಈ ಅಧಿಕಾರ ಹಸ್ತಾಂತರ ಇಡೀ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಶಾಸಕರೆಲ್ಲರೂ ಒಗ್ಗಟ್ಟು ಕಾಯ್ದುಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ.
Laxmi News 24×7