ಚಿಕ್ಕಬಳ್ಳಾಪುರ: ತಹಶೀಲ್ದಾರ್ ದ್ವಿತೀಯ ದರ್ಜೆಯ ಸಹಾಯಕನಿಗೆ ಕರೆ ಮಾಡಿ ಮನೆಗೆ ಎಸಿ ಹಾಕಿಸಿಕೊಡು ಎಂದು ಡಿಮ್ಯಾಂಡ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಗೌರಿಬಿದನೂರು ತಹಶೀಲ್ದಾರ್ ರಾಜಣ್ಣ, ದ್ವೀತಿಯ ದರ್ಜೆ ಸಹಾಯಕ ಮಹಮದ್ ಹಸನ್ ಮುಲ್ಲಾ ಅವರಿಗೆ ಕರೆ ಮಾಡಿದ್ದು, ಮನೆಗೆ ಎಸಿ ವ್ಯವಸ್ಥೆ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಮಾರ್ಚ್ 23ರಂದು ಕರೆ ಮಾಡಿ, ಏನು ಕೆಲಸ ಮಾಡದೆ ನಿನಗೆ ಸಂಬಳ ಮಾಡಿಕೊಟ್ಟಿದ್ದೇನೆ. ಹಾಗಾಗಿ ನೀನು ನನ್ನ ಮನೆಗೆ ಎಸಿ ಹಾಕಿಸಿಕೊಡುವಂತೆ ಏರು ಧ್ವನಿಯಲ್ಲಿ ಡಿಮ್ಯಾಂಡ್ ಮಾಡಲಾಗಿದೆ. ತಹಶೀಲ್ದಾರ್ ಅಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟಕ್ಕೇ ಸುಮ್ಮನಾಗದೆ ಮನೆಗೆ ಎಸಿ ಹಾಕಿಸಿಕೊಡಲಿಲ್ಲ ಎಂದು ಮಹಮದ್ ಹಸನ್ ಮುಲ್ಲಾಗೆ ತಹಶೀಲ್ದಾರ್ ರಾಜಣ್ಣ ನೋಟಿಸ್ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಆಡಿಯೋದಲ್ಲಿ ಮಾತನಾಡಿರುವ ರಾಜಣ್ಣ, ನಾನು ಹೊಸದಾಗಿ ಮನೆ ಮಾಡಿದ್ದೇನೆ. ಈ ಬಿಸಿಲಲ್ಲಿ ಮನೆಯಲ್ಲಿ ಮಲ್ಕೊಳಕ್ಕೆ ಆಗುತ್ತಾ, ಬಿಸಿಲಲ್ಲಿ ಮಲಗಲು ಏನ್ ಬೇಕು ನಮಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಜಣ್ಣ ಎಸಿ ಬೇಕು ಎಂದು ಉತ್ತರಿಸಿದ್ದಾರೆ. ನಮಗೆ ಒಂದು ಎಸಿ ವ್ಯವಸ್ಥೆ ಮಾಡಿಸಿ ಮತ್ತೆ ಎಂದು ಕೇಳಿದ್ದಾರೆ. ಅಲ್ಲದೆ ಎಸಿ ಹಾಕಿಸಬೇಕ್ರೀ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಎಸಿ ಹಾಕಿಸಿದರೆ ನಿಮಗೆ 28ರ ವರೆಗೂ ರಜೆ ಕೊಡುತ್ತೇನೆ ಎಂದು ಹೇಳಿದ್ದಾರೆ.