ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲಿರುವ ಜನರಿಗೆ ಕೊರೊನಾ ಅಟ್ಟಹಾಸದಿಂದಾಗಿ ಸಂಭ್ರಮಾಚರಣೆಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ವರ್ಷಾಂತ್ಯಕ್ಕೆ ಕುಣಿದು ಕುಪ್ಪಳಿಸಲು ಅವಕಾಶ ನೀಡದೆ, ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಿರುವ ಗೃಹ ಇಲಾಖೆ ಆ ಮೂಲಕ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಇಂದು ಮಧ್ಯಾಹ್ನ 12 ಗಂಟೆಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ.
ಸಂಜೆ 6ರ ಬದಲು ಮಧ್ಯಾಹ್ನ 12ರಿಂದಲೇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇಂದು ಮಧ್ಯಾಹ್ನ 12ರಿಂದ ನಾಳೆ ಮುಂಜಾನೆ 6ರವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ನಗರದಾದ್ಯಂತ ಖಾಕಿ ಸರ್ಪಗಾವಲು
ಕೊರೊನಾ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಯ ಭೀತಿ ಆವರಿಸಿಕೊಂಡಿರೋದು ಸಹಜ. ಹೀಗಾಗಿಯೇ ಬೆಂಗಳೂರು ನಗರದಾದ್ಯಂತ ಖಾಕಿ ಸರ್ಪಗಾವಲು ಹಾಕಲಾದೆ. ತಡರಾತ್ರಿಯೇ ಫೀಲ್ಡಿಗಿಳಿದ ಬೆಂಗಳೂರು ಪೊಲೀಸರು, ಪ್ರತಿಯೊಂದು ವಾಹನದ ತಪಾಸಣೆ ನಡೆಸಿದ್ದಾರೆ. ತಡರಾತ್ರಿ ಸಂಚರಿಸುವ ವಾಹನಗಳ ಮಾಹಿತಿ ಪಡೆದ ಪೊಲೀಸರು, ಯಾವ ಕಾರಣಕ್ಕಾಗಿ ಬಂದಿದ್ದೀರಿ ಎಲ್ಲಿಗೆ ಹೋಗುತ್ತಿದೀರಿ, ಉದ್ದೇಶವೇನು ಎಂದು ಪಿನ್ ಟು ಪಿನ್ ಡೀಟೈಲ್ಸ್ ತೆಗೆದುಕೊಂಡರು. ಜೊತೆಗೆ ಪ್ರತಿಯೊಬ್ಬರ ಡಿಎಲ್, ಇನ್ಶೂರೆನ್ಸ್, ತಪಾಸಣೆ ನಡೆಸಿದ ಪೊಲೀಸರು ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.