ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಐಗಳಿ ಗ್ರಾಮ ಪಂಚಾಯತ ಹದ್ದಿಯಲ್ಲಿ ಎಸ್ಸಿ/ಎಸ್ಟಿ ಫಲಾನುಭವಿಗಳ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿಸಿಕೊಂಡು, ಅವರಿಗೆ ಅಲ್ಪ-ಸ್ವಲ್ಪ ಹಣ ನೀಡಿ ಸರ್ಕಾರಿ ನೌಕರರೇ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತಿರುವ ಆಘಾತಕಾರಿ ಸಂಗತಿ ನಡೆದಿವೆ ಎನ್ನಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶ ನೀಡಲಾಗಿದೆಯಾದರೂ,ತನಿಖೆಯ ಹೆಸರಿನಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಲಾಗುತ್ತಿದೆ. ಈ ಮೂಲಕ ತಪ್ಪಿತಸ್ಥರ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ ಕೂಡ ಇದೇ ತಾಲೂಕಿನವರು ಆಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಗುತ್ತಿಲ್ಲ ಎನ್ನಲಾಗುತ್ತಿದೆ.
ಐಗಳಿಯ ಪರಶುರಾಮ ಗದಾಡಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪಡೆದು ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಆಕ್ರಮದ ಕುರಿತಂತೆ ದಾಖಲೆಗಳ ಸಮೇತ ಒಟ್ಟು 46 ಪುಟಗಳ ದೂರನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಲಾಗಿದೆ. ಡಿಸೆಂಬರ ತಿಂಗಳಲ್ಲಿಯೇ ದೂರು ಸಲ್ಲಿಸಲಾಗಿದೆ. ಅವರು ಅದನ್ನು ಅಥಣಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳಿಸಿ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಬರೆದಿದ್ದರು. ಆದರೆ ಪ್ರಕರಣದಲ್ಲಿ ತಪ್ಪಿತಸ್ಥ ಸರ್ಕಾರಿ ನೌಕರರ ವಿರುದ್ಧ ಇದುವರೆಗೆ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.
ತಮ್ಮ ದೂರಿನಲ್ಲಿ ಪರಶುರಾಮ ಗದಾಡಿ ಅವರು ಡಾ.ಅಂಬೇಡ್ಕರ ಅವಾಸ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಗ್ರಾಮೀಣ ಚಮ್ಮಾರರಿಗಾಗಿ ವಿಶೇಷ ವಸತಿ ಯೋಜನೆಗಳ ಅಡಿಯಲ್ಲಿ 2015-17, 2016-17 ಮತ್ತು 2017-18 ರಲ್ಲಿ ಐಗಳಿ ಗ್ರಾಮದಲ್ಲಿ ಮಂಜೂರಾದ ಮನೆಗಳು, ಮನೆಗಳ ಕೋಡ್ ನಂಬರ್, ಮೂಲ ಫಲಾನಿಭವಿಗಳ ಹೆಸರು, ಫಲಾನುಭವಿಗಳ ಹೆಸರಿನಲ್ಲಿ ಮಂಜೂರಾದ ಹಣದಲ್ಲಿ ಮನೆ ಕಟ್ಟಿಸಿಕೊಂಡ ಸರ್ಕಾರಿ ನೌಕರರ ಹೆಸರುಗಳ ಸಮೇತ ಜಿಲ್ಲಾ ಪಂಚಾಯತಿಗೆ ದೂರು ನೀಡಿದ್ದಾರೆ.