ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಕೋವಿಡ್-19ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಗುಂಡಿ ತೋಡಲು ಜೆಸಿಬಿಯೊಂದಿಗೆ ಬಂದಿದ್ದ ಕುಟುಂಬದವರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಅವರು ಬಂದಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಮಾಜಸೇವಕಿ ಸರಳಾ ಹೆರೇಕರ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಬಂದ ಬಳಿಕ ನಿವಾಸಿಗಳು, ಅಂತ್ಯಕ್ರಿಯೆಗೆ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ಅಲ್ಲಿಂದ ವಾಹನ ಹಾಗೂ ಕುಟುಂಬದವರನ್ನು ವಾಪಸ್ ಕಳುಹಿಸಿದರು ಎಂದು ತಿಳಿದುಬಂದಿದೆ.
‘ಅಕ್ಕಪಕ್ಕದಲ್ಲಿಯೇ ಎರಡು ಸ್ಮಶಾನಗಳಿವೆ.
ಮೃತ ವ್ಯಕ್ತಿಯ ಕುಟುಂಬದವರು ಮಾಹಿತಿ ಕೊರತೆಯಿಂದಾಗಿ ಆ ರುದ್ರಭೂಮಿಗೆ ಹೋಗಿದ್ದಾರೆ. ಇದರಿಂದ ಗೊಂದಲ ಉಂಟಾಗಿತ್ತು. ಆಸ್ಪತ್ರೆಯಿಂದ ಸ್ಥಳಕ್ಕೆ ಮೃತದೇಹ ತಂದಿರಲಿಲ್ಲ. ಗುಂಡಿ ತೆಗೆದು ಸಿದ್ಧತೆ ಮಾಡಿಕೊಳ್ಳಲು ಅವರು ಬಂದಿದ್ದರು. ವಿಷಯ ತಿಳಿದ ಬಳಿಕ ಸಮೀಪದ ಇನ್ನೊಂದು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಪಾಲಿಕೆಯಿಂದ ವ್ಯವಸ್ಥೆ ಮಾಡಿಕೊಡಲಾಯಿತು’ ಎಂದು ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.