ನವದೆಹಲಿ: ಅನುಷ್ಕಾಳನ್ನು ಭೇಟಿಯಾಗದಿದ್ದರೆ ಜೀವನದಲ್ಲಿ ನಾನು ಬದಲಾಗುತ್ತಿರಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ ನಂತರ ಭಾರತ ಕ್ರಿಕೆಟ್ ತಂಡ ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಈಗ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಜೊತೆ ‘ಓಫನ್ ನೆಟ್ಸ್ ವಿತ್ ಅಗರ್ವಾಲ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿರಾಟ್, ಪತ್ನಿಯನ್ನು ಹಾಡಿಹೊಗಳಿದ್ದಾರೆ
ನಾನು ನನ್ನ ಬವದಲಾವಣೆಯ ಪೂರ್ಣ ಪ್ರಮಾಣದ ಕ್ರೆಡಿಟ್ ಅನ್ನು ಅನುಷ್ಕಾಗೆ ನೀಡುತ್ತೇನೆ. ಆಕೆ ನನ್ನ ಬಾಳ ಸಂಗಾತಿಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಜೀವನದಲ್ಲಿ ಮಾಡುವ ಒಳ್ಳೆಯ ಕೆಲಸಗಳು ಇನ್ನೂ ಮುಂದೆ ಬಹಳ ಇದೆ ಎಂದು ಆಕೆ ನನಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಒಬ್ಬ ಆಟಗಾರನಾಗಿ ನನ್ನ ಜವಾಬ್ದಾರಿ ಏನು? ನಾನು ಈಗಿರುವ ಸ್ಥಾನದಲ್ಲಿ ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉತ್ತಮ ಗುಣಗಳ ಮೂಲಕ ಜನರಿಗೆ ಒಳ್ಳೆಯ ಮಾದರಿಯಾಗಿರಬೇಕು ಎಂಬುದೆಲ್ಲವನ್ನು ಕಲಿಸಿ ಕೊಟ್ಟವಳು ಅನುಷ್ಕಾ ಎಂದು ವಿರಾಟ್ ತಿಳಿಸಿದ್ದಾರೆ.

ನಾನು ಅನುಷ್ಕಾಳನ್ನು ಭೇಟಿ ಮಾಡದಿದ್ದರೆ ನಾನು ಮುಕ್ತ ವ್ಯಕ್ತಿಯಾಗುತ್ತಿರಲಿಲ್ಲ. ನನ್ನ ಸ್ವಭಾವ ತುಂಬಾ ಕಠಿಣವಾಗಿದ್ದರಿಂದ ನಾನು ಬದಲಾಗುತ್ತಿರಲಿಲ್ಲ. ಆದರೆ ಇಂದು ಅವಳು ಒಳ್ಳೆಯ ವ್ಯಕ್ತಿಯಾಗಿ ನನ್ನನ್ನು ಬದಲಾಯಿಸಿದ್ದಾಳೆ ಎಂದು ಪತ್ನಿ ಅನುಷ್ಕಾ ಶರ್ಮಾರನ್ನ ವಿರಾಟ್ ಹಾಡಿಹೊಗಳಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ನಾನು ಅನುಷ್ಕಾಳಿಗಾಗಿ ಅವಳ ಹುಟ್ಟುಹಬ್ಬದ ದಿನ ಕೇಕ್ ಮಾಡಿದ್ದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಕೊರೊನಾ ಲಾಕ್ಡೌನ್ನಿಂದ ಕಳೆದ ಮಾರ್ಚ್ನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಕ್ಕೆ ಹೋಗಿತ್ತು. ಈಗ ಈ ವರ್ಷದ ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಎಂದಿನಂತೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 177 ಪಂದ್ಯಗಳನ್ನು ಆಡಿದ್ದಾರೆ.

ಐಪಿಎಲ್ನಲ್ಲಿ ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.
Laxmi News 24×7