ಬಳ್ಳಾರಿ: ಜಮೀನಿನ ಇನಾಮು ರದ್ದತಿ ಮಾಡಿ ಪಟ್ಟಾ ನಮೂದು ಮಾಡಿಕೊಡುವ ಕೆಲಸಕ್ಕಾಗಿ ₹1.10 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕಿ (FDA) ಹಾಗೂ ಆಕೆಯ ಮಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ಗೋವಿಂದ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಸುವರ್ಣ ಹಾಗೂ ಆಕೆಯ ಮಗ ದೀಪಕ್ ಅವರನ್ನು ಬಲೆಗೆ ಬೀಳಿಸಿದ್ದಾರೆ.
ದೂರುದಾರ ಗೋವಿಂದ ಅವರ ಹೆಸರಿನ ಸರ್ವೇ ನಂ.57/4/ಡಿ ವ್ಯಾಪ್ತಿಯ 7 ಎಕರೆ 68 ಸೆಂಟ್ಸ್ ಜಮೀನಿನ ಪಹಣಿಯಲ್ಲಿ ಇರುವ ಇನಾಮ್ ದಾಖಲೆಯನ್ನು ರದ್ದುಪಡಿಸಿ, ಪಟ್ಟಾ ಎಂದು ನಮೂದು ಮಾಡಿಕೊಡುವ ಸಂಬಂಧ ಸಿರುಗುಪ್ಪ ತಾಲೂಕು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಕೆಲಸ ನಿರ್ವಹಿಸಲು FDA ಸುವರ್ಣ ಅವರು ₹1,10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಗೋವಿಂದ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಿಸಿ ಆಕ್ಟ್-1988ರ ಕಲಂ 7(ಎ) ಅಡಿ ಪ್ರಕರಣ ದಾಖಲಿಸಿಕೊಂಡು ಬಲೆ ಬೀಸಿದ್ದರು. ಕಾರ್ಯಾಚರಣೆಯ ವೇಳೆ ಸುವರ್ಣ ಅವರು ತಮ್ಮ ಮಗ ದೀಪಕ್ ಮೂಲಕ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಒಂದೇ ಪ್ರಕರಣದಲ್ಲಿ ತಾಯಿ ಹಾಗೂ ಮಗ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಮುಂದುವರಿಸಿದ್ದಾರೆ.
Laxmi News 24×7