ತುಮಕೂರು: ಕುಣಿಗಲ್ ತಾಲ್ಲೂಕಿನ ಆಲ್ಕೆರೆ (ಹಾಲ್ಕೆರೆ) ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ದಿಂಬಿನಿಂದ ಕೊಂದು, ನಂತರ ಸ್ವತಃ ನೇಣಿಗೆ ಶರಣಾಗಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮೃತರು ಶಿವಣ್ಣ (40), ಅವನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಶಿವಣ್ಣನ ಮೃತದೇಹವು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಕ್ಕಳು ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಶಿವಣ್ಣ ಮೊದಲು ತನ್ನ ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು, ನಂತರ ಸ್ವತಃ ನೇಣಿಗೆ ಶರಣಾಗಿದ್ದಾನೆ.
ಕೌಟುಂಬಿಕ ಕಲಹವೇ ಕಾರಣ
ಶಿವಣ್ಣನ ಪತ್ನಿ ಕಾವ್ಯ ಕಳೆದ ಒಂದು ವಾರದ ಹಿಂದೆ ಅವಳ ಅಕ್ಕನ ಮಗನಾದ ಹೆಮಂತ್ ಎಂಬುವವನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಶಿವಣ್ಣ ಮಾನಸಿಕವಾಗಿ ತುಂಬಾ ಕುಗ್ಗಿದ್ದನು. ಪತ್ನಿ ಪರಾರಿಯಾದ ಬಳಿಕ ಶಿವಣ್ಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಕಾವ್ಯ ಮತ್ತೆ ಮನೆಗೆ ಬಂದಿದ್ದಳು.
ಆದರೆ ಬಂದ ಎರಡೇ ದಿನಗಳಲ್ಲಿ, ಶಿವಣ್ಣ ಇಲ್ಲದ ಸಮಯವನ್ನು ಬಳಸಿಕೊಂಡು ಕಾವ್ಯ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು ಪುನಃ ಹೆಮಂತ್ ಜೊತೆ ಪರಾರಿಯಾಗಿದ್ದಳು. ಎರಡನೇ ಬಾರಿ ಪತ್ನಿ ಪರಾರಿಯಾದ ಬಳಿಕ ಇದರಿಂದ ಮನ ನೊಂದ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಮೆಲ್ನೊಟಕ್ಕೆ ಕಂಡುಬಂದಿದೆ.
ಈ ದುರಂತಕ್ಕೂ ಮೊದಲೇ ಶಿವಣ್ಣನ ತಾಯಿ ಹೊನ್ನಮ್ಮ ಸೋಸೆಯ ಕಾಟಕ್ಕೆ ಬೇಸತ್ತು ಮೂರು ವರ್ಷಗಳ ಹಿಂದೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು.
ಘಟನೆಯ ಸ್ಥಳಕ್ಕೆ ಕುಣಿಗಲ್ ಠಾಣೆಯ ಸಿಪಿಐ ಮಾಧ್ಯಾನಾಯಕ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡಿರುವ ಪೊಲೀಸರು, ಕಾವ್ಯ ಮತ್ತು ಹೆಮಂತ್ ಅವರನ್ನು ಪತ್ತೆ ಮಾಡಲು ತನಿಖೆ ತೀವ್ರಗೊಳಿಸಿದ್ದಾರೆ.
Laxmi News 24×7