ಬೆಳಗಾವಿ: ಮಹಿಳೆ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲೇ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು..ಗ್ರಾಮೀಣ ಕ್ಷೇತ್ರವಾದ ಕೊಂಡಸಕೊಪ್ಪ ಗ್ರಾಮದ ಕುರುಬ ಸಮಾಜದ ಕುಟುಂಬವೊಂದರ ಮೇಲೆ ಅದೇ ಸಮಾಜದವರು ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ ಆ ಕುಟುಂಬದ ಜೊತೆ ಮಾತಾಡಿದವರಿಗೆ 5000 ದಂಡ ಹಾಗೂ ಮಾತಾಡಿದವರ ಬಗ್ಗೆ ಮಾಹಿತಿ ಕೊಟ್ಟವರಿಗೆ 1000 ರೂಪಾಯಿ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.
ಕೊಂಡುಸಕೊಪ್ಪ ಗ್ರಾಮದ ಕೆಲ ಪಂಚರು ದೇವಸ್ಥಾನ ಪೂಜೆ ಹಾಗೂ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಂಡಿದ್ದಾರೆ. ಕುಟುಂಬದವರೊಂದಿಗೆ ಮಾತನಾಡಿದರೆ 5000 ರೂ. ದಂಡ ವಿಧಿಸುವುದಾಗಿ ಹಾಗೂ ಮಾಹಿತಿ ನೀಡಿದವರಿಗೆ 1000 ರೂ. ಬಹುಮಾನ ಘೋಷಿಸಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಹೋದರ ಸಂಬಂಧಿಗಳೇ ಬಹಿಷ್ಕಾರ: ಗ್ರಾಮದ ಬೀರದೇವರ ಪೂಜಾರಿ ಆಗಿದ್ದ ನರಸೋಬಾ ಸಾಂಬ್ರೇಕರ್ ಕುಟುಂಬಕ್ಕೆ ಸಹೋದರ ಸಂಬಂಧಿಗಳೇ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ದೇವಾಲಯದ ಪೂಜೆ ವಿಚಾರದಲ್ಲಿ ಪಂಚ ಕಮಿಟಿ ಜೊತೆಗೆ ಭಿನ್ನಾಭಿಪ್ರಾಯ ಮೂಡಿತ್ತು. ದೇವಾಲಯದ ಪೂಜಾರಿ ಹೇಳುವ ಭವಿಷ್ಯಕ್ಕೆ ನರಸೋಬಾ ವಿರೋಧ ವ್ಯಕ್ತಪಡಿಸಿದ್ದರಂತೆ ಈ ಎರಡು ಕಾರಣ ಮುಂದಿಟ್ಟುಕೊಂಡು ಪಂಚ ಕಮಿಟಿಯಿಂದ ನರಸೋಬ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ಕೊಟ್ಟಿದ್ದಾರೆ ಎನ್ನುವ ಆರೋಪವಿದೆ.
ಕುಟುಂಬದ ಮನೆ ಮೇಲೆ ಕಲ್ಲು ತೂರಾಟ: ಬಹಿಷ್ಕಾರ ಮಾಡಿದ ಕುಟಂಬದ ಮನೆ ಮೇಲೆ ರಾತ್ರಿಯಾದ್ರೆ ಸಾಕು ಕಲ್ಲುಗಳು ಬೀಳ್ತಿವೆಯಂತೆ. ಊರಲ್ಲಿ ಯಾರು ಮಾತಾಡ್ತಿಲ್ಲ ಮದುವೆ, ಕಾರ್ಯಕ್ರಮಗಳಿಗೆ ಆಹ್ವಾನ ನೀಡ್ತಿಲ್ಲ. ಐದು ವರ್ಷದ ಮಗುವನ್ನ ಕೂಡ ಜನರು ದೂರ ಇಟ್ಟಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಶೀಘ್ರವೇ ಸಚಿವೆ ಹೆಬ್ಬಾಳಕರ ಅವರು ಅಮಾನವೀಯ ನಿರ್ಧಾರ ತೆಗೆದುಕೊಂಡಿರುವ ಪಂಚರ ವಿರುದ್ಧ ಕ್ರಮ ಕಯಗೊಂಡು ನೊಂದ ಕುಟುಂಬ ಎಂದಿನಂತೆ ಸಾಮಾಜಿಕ ಬೆರೆತು ಬಾಳುವೆ ಮಾಡುವ ವಾತಾವರಣ ನಿರ್ಮಿಸಬೇಕು ಎಂದು ನೊಂದ ಕುಟುಂಬ ಒತ್ತಾಯಿಸಿದೆ.
Laxmi News 24×7