ಬೈಲಹೊಂಗಲ: ದನಗಳನ್ನು ಸಾಗಿಸುತ್ತಿದ್ದ ಬೊಲೆರೋ ವಾಹನ ಮಿನಿ ಡಿಸೈಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾನುವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಗಾಯಗೊಂಡ ಘಟನೆ ನಗರದ ಧಾರವಾಡ ಬೈಪಾಸ್ ರಸ್ತೆಯ ಹಳೆಯ ದನದ ಮಾರುಕಟ್ಟೆ ಸಮೀಪ ನಡೆದಿದೆ.
ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದ ಕಲ್ಲಪ್ಪ ವಡ್ಡರಗಾಂವಿ ಅವರಿಗೆ ಸೇರಿದ ಬೊಲೆರೋ ವಾಹನವು ಮೂಡಲಗಿಯಿಂದ ದನಗಳನ್ನು ತುಂಬಿಕೊಂಡು ಬೈಲಹೊಂಗಲದ ಹಳೆಯ ದನದ ಮಾರುಕಟ್ಟೆ ಕಡೆ ಸಾಗುತ್ತಿತ್ತು. ಇದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಮಿನಿ ಡಿಸೈಲ್ ಟ್ಯಾಂಕರ್ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದ್ದು, ಅಪಘಾತ ಸಂಭವಿಸಿದೆ.
ಡಿಕ್ಕಿಯ ಪರಿಣಾಮ ಬೊಲೆರೋದಲ್ಲಿದ್ದ ನಾಲ್ಕು ದನಗಳು ಮತ್ತು ಒಬ್ಬ ವ್ಯಕ್ತಿ ಸಿಲುಕಿಕೊಂಡಿದ್ದು, ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದರು.
ಗಾಯಗೊಂಡ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ನಂತರ ಬೊಲೆರೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪಿ.ಎಸ್.ಐ ಎಫ್.ವೈ. ಮಲ್ಲೂರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
Laxmi News 24×7