ಮರ್ಯಾದಾ ಹತ್ಯೆ ಘಟನೆ ನಡೆದ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಹುಬ್ಬಳ್ಳಿ: ಅನ್ಯ ಜಾತಿಯ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ತನ್ನ ಏಳು ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದ ಘಟನೆಯಿಂದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಡಿ.21ರಂದು ಘಟನೆ ನಡೆದಾಗ ಪುಟ್ಟ ಗ್ರಾಮದ ಜನರು ಭಯದಿಂದ ಮನೆ ಬಿಟ್ಟು ಹೊರ ಬಂದಿರಲಿಲ್ಲ. ಈಗ ಗ್ರಾಮದಲ್ಲಿ ಭಯದ ವಾತಾವರಣ ದೂರವಾಗಿದೆ.
ಗ್ರಾಮದ ಜನರು ನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಚಟುವಟಿಕೆ, ಅಂಗಡಿ ಮುಂಗಟ್ಟು ತೆರೆದಿದ್ದು, ಗ್ರಾಮದಲ್ಲಿ ಈಗಲೂ ಪೊಲೀಸರು ಮೊಕ್ಕಾಂ ಹೂಡಿದ್ದು, ಗ್ರಾಮದ ಜನರು ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿಕೆ ಹಾಗೂ ಭಯ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಆಗಬಾರದಿತ್ತು. ಏನು ಮಾಡಲಿಕ್ಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ಗಲ್ಲಿಗೂ ಸಿಸಿಟಿವಿ ಕಣ್ಗಾವಲು: ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಗಲ್ಲಿ ಗಲ್ಲಿಯಲ್ಲಿ ಸಿಸಿಟಿವಿಗಳನ್ನು ಅಳವಡಿಕೆ ಮಾಡುವ ಮೂಲಕ ಕಟ್ಟೆಚ್ಚರ ವಹಿಸಿದೆ. ಎಂಟು ಸಿಸಿಟಿವಿಗಳನ್ನು ಪೊಲೀಸ್ ಇಲಾಖೆ ಅಳವಡಿಸಿದ್ದು, ಗ್ರಾಮದಲ್ಲಿನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡು ಗ್ರಾಮದಲ್ಲಿನ ಆಗುಹೋಗುಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಗ್ರಾಮಸ್ಥರಾದ ಪ್ರಕಾಶ ಹರಿಜನ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಘಟನೆ ನಡೆದಾಗ ಆತಂಕ, ಭಯ ಇದ್ದದ್ದು ನಿಜ. ಆದರೆ ನಮ್ಮ ಗ್ರಾಮದಲ್ಲಿ ಎಲ್ಲ ಜಾತಿ, ಜನಾಂಗದವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಇದೊಂದು ಘಟನೆ ಆಗಬಾರದಿತ್ತು, ಆಗಿದೆ. ಅದು ಅವರ ವೈಯಕ್ತಿಕ ಕಾರಣಕ್ಕೆ ಆಗಿದೆ. ಗ್ರಾಮದಲ್ಲಿ ಸದ್ಯ ಯಾವುದೇ ಭಯದ ವಾತಾವರಣವಿಲ್ಲ. ಕರ್ನಾಟಕ ಸರ್ಕಾರ ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳಲಿದೆ. ಎಲ್ಲಾ ಸಮಾಜದ 150 ಮನೆಗಳಿದ್ದು, 600 ಜನಸಂಖ್ಯೆ ಗ್ರಾಮದಲ್ಲಿ ಇದೆ ಎಂದರು.
Laxmi News 24×7