ಬೆಂಗಳೂರು: ಕಾಂತಾರ ಸಿನಿಮಾದಲ್ಲಿನ ದೈವಕ್ಕೆ ದೆವ್ವ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಣವೀರ್ ಸಿಂಗ್ ಲಕ್ಷಾಂತರ ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕೀಲ ಪ್ರಶಾಂತ್ ಮೆಥಲ್ ಎಂಬವರು ದೂರು ನೀಡಿದ್ದಾರೆ.
ದೂರಿನ ವಿವರ: ನವೆಂಬರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಣವೀರ್ ಸಿಂಗ್, ಕಾಂತಾರ ಚಲನಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ ದೈವ (ದೈವ ಕೋಲ) ಸಂಪ್ರದಾಯವನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದ್ದಾರೆ. ವೇದಿಕೆಯಲ್ಲಿದ್ದ ಸಿಂಗ್ ಅವರು ಪಂಜುರ್ಲಿ/ಗುಳಿಗ ದೈವದ (ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಪೂಜಿಸಲ್ಪಡುವ ಪವಿತ್ರ ಶಕ್ತಿ) ದೈವಿಕ ಅಭಿವ್ಯಕ್ತಿಗಳನ್ನು ಅಸಭ್ಯ, ಅವಹೇಳನಕಾರಿ ಮತ್ತು ಹಾಸ್ಯಮಯ ರೀತಿಯಲ್ಲಿ ಅನುಕರಿಸಿದ್ದಾರೆ. ಪವಿತ್ರ ದೈವವನ್ನು “ಭೂತ” (“ಸ್ತ್ರೀ ಭೂತ”) ಎಂದು ಮೌಖಿಕವಾಗಿ ಉಲ್ಲೇಖಿಸಿದ್ದಾರೆ. ಚಿತ್ರದಲ್ಲಿ ಅದು ನಮ್ಮ ರಾಜ್ಯದ ಅಧಿದೇವತೆ ಚಾಮುಂಡೇಶ್ವರಿಯಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯಲ್ಲಿ ದೈವವು ದೆವ್ವವಲ್ಲ. ದೇವರನ್ನು “ಭೂತ” ಎನ್ನುವ ಮೂಲಕ ರಣವೀರ್ ಅವರಿಂದ ದೇವದೂಷಣೆಯಾಗಿದೆ ಮತ್ತು ಹಿಂದೂ ನಂಬಿಕೆಗಳಿಗೆ ಉದ್ದೇಶಪೂರ್ವಕ ನೋವುಂಟು ಮಾಡಲಾಗಿದೆ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನಟರೊಬ್ಬರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಥ ವ್ಯಂಗ್ಯ ಪ್ರದರ್ಶಿಸುವ ಮೂಲಕ ಕಾಂತಾರ ಚಲನಚಿತ್ರ ಮಾತ್ರವಲ್ಲದೆ ತುಳು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ದೈವ ಭಕ್ತರು ಮತ್ತು ಸಾರ್ವಜನಿಕರಿಗೆ ತೀವ್ರ ಮಾನಸಿಕ ಯಾತನೆ, ಕೋಪ ಮತ್ತು ಅಸಮಾಧಾನ ಉಂಟುಮಾಡಿದೆ. ಇದು ಸಾರ್ವಜನಿಕ ಶಾಂತಿ ಭಂಗಗೊಳಿಸುವ ಮತ್ತು ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಬಹುದು.ಆದ್ದರಿಂದ ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 299 (ಯಾವುದೇ ವರ್ಗ/ಧರ್ಮದ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು), 302 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಪದಗಳನ್ನು ಹೇಳುವುದು ಅಥವಾ ಸನ್ನೆ ಮಾಡುವುದು), 196 (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ)ದಡಿ ಎಫ್ಐಆರ್ ದಾಖಲಿಸಿಕೊಂಡು ಇಂಥ ಅಗೌರವ ಪುನರಾವರ್ತನೆಯಾಗದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
Laxmi News 24×7