ಹುಬ್ಬಳ್ಳಿ: ಧಾರವಾಡದ ಐಐಟಿಗೆ ಕೇಂದ್ರ ಸರ್ಕಾರ ₹2000 ಕೋಟಿ ಹೆಚ್ಚುವರಿ ಹಣ ನೀಡುತ್ತಿದೆ. ದೇಶದ ಎಲ್ಲಾ ಐಐಟಿಗಳಂತೆ ಇದೂ ಉನ್ನತ ಅಭಿವೃದ್ಧಿ ಕಾಣುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಭಾನುವಾರ, ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ ‘ಭಾರತದ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ’ (Indian Education and the True Role of Teacher) ರಾಷ್ಟ್ರ ಮಟ್ಟದ ಸಂವಾದದ ಸಮಾರೋಪ ಸಮಾರಂಭ ಉದ್ದೇಶಿಸಿ ಕೇಂದ್ರ ಸಚಿವ ಜೋಶಿ ಮಾತನಾಡಿದರು.
ಶಿಕ್ಷಣದಲ್ಲಿ ಇಂದು ಭಾರತ ಮುನ್ನಡೆ ಸಾಧಿಸಿದ್ದು, 23 ಐಐಟಿಗಳನ್ನು ಹೊಂದಿದೆ. ದೇಶದ ಎಲ್ಲಾ ಐಐಟಿಗಳಂತೆ ಧಾರವಾಡ ಐಐಟಿಯನ್ನು ಸಹ ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿ-ಯುವ ಸಮುದಾಯಕ್ಕೆ 21ನೇ ಶತಮಾನದ ಅಗತ್ಯಗಳಿಗೆ ಪೂರಕವಾದಂತಹ ಶಿಕ್ಷಣ ಒದಗಿಸುವ ಗುರಿ ಹೊಂದಿದೆ ಎಂದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಒಂದು ಐತಿಹಾಸಿಕ ಶಿಕ್ಷಣ ಸುಧಾರಣಾ ಯೋಜನೆಯಾಗಿದೆ ಎಂದು ಬಣ್ಣಿಸಿದರು.