ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್ಮೆಂಟ್ 18ನೇ ಮಹಡಿಗೆ ಬೀದಿನಾಯಿಗಳನ್ನು ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಆ ಬೀದಿ ನಾಯಿಗಳು ಕಚ್ಚಿವೆ. ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ. ಆ ನಾಯಿಗಳು ಅಪಾರ್ಟ್ಮೆಂಟ್ನಿಂದ ಹೊರಹೋಗಬೇಕು. ಬೀದಿನಾಯಿಗಳ ನಿರ್ವಹಣೆಗೆ 5 ಕೋಟಿ ರೂ. ಬಜೆಟ್ ಇರುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ವಿಧಾನಸೌಧದ ಸುತ್ತವೇ ಇವೆಯಂತೆ 1500 ಬೀದಿ ನಾಯಿಗಳು: ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಸಭೆಯ ಸುತ್ತಮುತ್ತ 1500 ನಾಯಿಗಳಿರುವ ಬಗ್ಗೆ ಸಭಾಧ್ಯಕ್ಷರು ಸಭೆ ನಡೆಸಿದ್ದಾರೆ. ಬೀದಿ ನಾಯಿಗಳೆಲ್ಲಾ ಬೀದಿಯಲ್ಲೇ ಇರಲಿ, ಅಪಾರ್ಟ್ಮೆಂಟ್ಗೆ ಬರುವುದು ಬೇಡ ಎಂದರು.ಈ ಬಗ್ಗೆ ಸಿಎಸ್ ಜತೆ ಮಾತನಾಡಿದ್ದೇನೆ ಎಂದ ಸ್ಪೀಕರ್: ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಬೀದಿ ನಾಯಿಗಳಿಗೆ ಗೌರವಪೂರ್ವಕ ಬದುಕು ಕೊಡಬೇಕೆಂಬ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
Laxmi News 24×7