ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಡಾ.ಕೆ.ಸುಧಾಕರ್ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮತ್ತು ಮತದಾನದ ನಂತರವೂ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದು, ಈ ಮಾತುಗಳು ಈಗ ತೀವ್ರ ಟ್ರೋಲ್ಗೆ ಗುರಿಯಾಗಿದೆ.
ಬಿಜೆಪಿ ಮುಖಂಡರು, ಕಾರ್ಯಕರ್ತರು ‘ಪ್ರದೀಪ್ ರಾಜೀನಾಮೆ ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಪ್ರದೀಪ್ ಈಶ್ವರ್ ಅಯ್ಯರ್ ಪಿ.ಇ, ಶಾಸಕರು, ಕರ್ನಾಟಕ ವಿಧಾನಸಭೆ ಎನ್ನುವ ರಾಜೀನಾಮೆ ಪತ್ರವು ವಾಟ್ಸ್ಆಯಪ್ ಗ್ರೂಪ್ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಪತ್ರವು ಅಸಲಿಯೊ ನಕಲಿಯೊ ಎನ್ನುವ ಬಗ್ಗೆ ವಾಟ್ಸ್ಆಯಪ್ ಗ್ರೂಪ್ಗಳಲ್ಲಿ ಚರ್ಚೆಗಳು ಸಹ ನಡೆದವು. ‘ಇದು ನಕಲಿ ರಾಜೀನಾಮೆ ಪತ್ರ’ ಎಂದು ಶಾಸಕ ಆಪ್ತ ಸಹಾಯಕರು ‘ಎಂಎಲ್ಇ ಮಿಡಿಯಾ ಗ್ರೂಪ್’ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಪತ್ರದಲ್ಲಿ ಏನಿದೆ: ‘ಬಾಲ್ಯದಿಂದಲೂ ಪುಣ್ಯಕೋಟಿ ಕಥೆಯನ್ನು ಆದರ್ಶವಾಗಿಸಿಕೊಂಡು ‘ಕೊಟ್ಟ ಮಾತು-ಇಟ್ಟ ಹೆಜ್ಜೆ ತಪ್ಪಬಾರದು’ ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತ ಬಂದವನು ನಾನು. ನಾನು ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿರುತ್ತೇನೆ.
ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಆಡಿದ ಮಾತಿಗೆ ಬದ್ಧನಾಗಿ ಸ್ವಿಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.