ಕೊಪ್ಪಳ/ಬಾಗಲಕೋಟೆ: ಯಾದಗಿರಿ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕಗೊಂಡಿರುವ ಕೊಪ್ಪಳ ನಗರದ ಪ್ರಭು ಲೋಕರೆಗೆ ಓದು-ಬರಹ ಬಾರದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಗಳಿಸಿದ್ದು ಹೇಗೆ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೊಪ್ಪಳ ಠಾಣೆಗೆ ಜಿಲ್ಲಾ ನ್ಯಾಯಾಲಯದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ದೂರು ನೀಡಿದ್ದಾರೆ.
ಏಳನೇ ತರಗತಿ ವಿದ್ಯಾರ್ಹತೆ ಮೇಲೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ ಆಗಿ ನೇಮಕಗೊಂಡಿದ್ದ ಪ್ರಭು, ಏ.22ರಂದು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕಗೊಂಡಿದ್ದಾನೆ. ಪ್ರಭು ಸಲ್ಲಿಸಿರುವ ಶೈಕ್ಷಣಿಕ ದಾಖಲೆ ಹಾಗೂ ಪಡೆದ ಅಂಕಗಳ ಬಗ್ಗೆ ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದು ಆತನಿಗೆ ಸರಿಯಾಗಿ ಇಂಗ್ಲಿಷ್, ಹಿಂದಿ ಭಾಷೆ ಓದಲು-ಬರೆಯಲು ಬರುವುದಿಲ್ಲವೆಂದು ಗಮನಕ್ಕೆ ಬಂದಿದೆ. ಹೀಗಾಗಿ ಆತನ ಶೈಕ್ಷಣಿಕ ದಾಖಲೆ ಬಗ್ಗೆ ಶಂಕೆ ಇದ್ದು, ತನಿಖೆ ನಡೆಸುವಂತೆ ನ್ಯಾಯಾಧೀಶರ ದೂರಿನನ್ವಯ ಕೊಪ್ಪಳ ನಗರ ಠಾಣೆಯಲ್ಲಿ ಏ.26ರಂದು ಪ್ರಕರಣ ದಾಖಲಾಗಿದೆ.
ವರದಿ ಸಲ್ಲಿಕೆ: ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲೆ ಜಮಖಂಡಿ ಬಿಇಒ ಅಶೋಕ ಬಸಣ್ಣವರ ಪರಿಶೀಲನೆ ನಡೆಸಿ ಮಂಗಳವಾರ ಡಿಡಿಪಿಐ ಬಿ.ಕೆ.ನಂದನೂರ ಅವರಿಗೆ ಪ್ರಾಥಮಿಕ ವರದಿ ನೀಡಿದ್ದಾರೆ. ದೂರ ಶಿಕ್ಷಣ ನ್ಯೂ ದೆಹಲಿ, ಮಿನಿಸ್ಟ್ರಿ ಆಪ್ ಹ್ಯುಮನ್ ರಿಸೌರ್ಸ್ ಡೆವೆಲಪ್ಮೆಂಟ್ ಫಾಲೋಡ್ ಬೈ ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜ್ಯುಕೇಶನ್ ಸಿಲೇಬಸ್ ಸೆಕೆಂಡರಿ (10 ನೇ ತರಗತಿ) ಸಂಸ್ಥೆಯಿಂದ ಅಂಕಪಟ್ಟಿ ಕೊಡಲಾಗಿದೆ. ಬನಹಟ್ಟಿ ಪಟ್ಟಣದ ಸೊಷಿಯಲ್ ಡೆವೆಲಪ್ಮೆಂಟ್ ಆಂಡ್ ಎಜ್ಯುಕೇಷನ್ ಸೊಸೈಟಿ ಎನ್ನುವ ಸಂಸ್ಥೆಯ ಮೂಲಕ ಕೊಪ್ಪಳ ಮೂಲದ ಪ್ರಭು 2018ರ ಮೇ ತಿಂಗಳಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದಿದ್ದಾನೆ. ಈತನ ನೋಂದಣಿ ಸಂಖ್ಯೆ ಕೆಎಸ್ಡಿಇಇಬಿ00221 ಎಂದಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಸಂಸ್ಥೆಯೂ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿ ಆಗಿರುವುದಿಲ್ಲ ಎಂದು ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ.
ಪರೀಕ್ಷೆ ನಡೆಸಿದವರು ಯಾರು?
ಬನಹಟ್ಟಿಯಲ್ಲಿ ಇದೆ ಎನ್ನಲಾದ ಆ ಸಂಸ್ಥೆ ಎಲ್ಲಿದೆ? ಅದರ ಕಚೇರಿ ಯಾವುದು? ಪರೀಕ್ಷೆಗಳನ್ನು ಎಲ್ಲಿ ನಡೆಸುತ್ತಾರೆ? ಹಾಗೂ ಯಾರು ನಡೆಸಿಕೊಂಡು ಬಂದಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪರೀಕ್ಷೆ ನಡೆಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಜಮಖಂಡಿ ಬಿಇಒ ಅಶೋಕ ಬಸಣ್ಣವರ ಹಾಗೂ ಡಿಡಿಪಿಐ ಬಿ.ಕೆ. ನಂದನೂರ ಹೇಳುತ್ತಾರೆ. ಇದೀಗ ಪರೀಕ್ಷೆ ನಡೆಸಿಕೊಂಡು ಬಂದವರು ಯಾರು? ವಿದ್ಯಾರ್ಥಿಗಳಿಂದ ಶುಲ್ಕ ಪಡೆದುಕೊಂಡವರು ಯಾರು? ಎನ್ನುವ ಬಗ್ಗೆ ಮಾಹಿತಿ ಸಂಗ್ರಹ ನಡೆದಿದೆ ಎಂದು ತಿಳಿದು ಬಂದಿದೆ.