ಬೆಂಗಳೂರು : ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಇದೀಗ ಒಬ್ಬ ಆರೋಪಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೃತ್ಯದ ಬಳಿಕ ಹೈದರಾಬಾದ್ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಹುಸೇನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ದೊರೆಕಿದೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಸಣ್ಣಪುಟ್ಟ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವನಿಗೆ ಜೈಲಿನಲ್ಲಿ ಹೈದರಾಬಾದ್ ಮೂಲದ ಹುಸೇನ್, ಸಿಕಂದರ್ ಹಾಗೂ ವಿಕಾಸ್ನ ಪರಿಚಯವಾಗಿತ್ತು. ಒಟ್ಟಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಗುರುವಾರ ಬೆಳಗ್ಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್ ಅಂಗಡಿಗೆ ಬಂದಿದ್ದರು. ನಂತರ ಮಾಲೀಕ ಮನೋಜ್ ಲೋಹರ್ (30) ಮೇಲೆ ಗುಂಡು ಹಾರಿಸಿ 1 ಕೆ.ಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣಾ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು, ಹೈದರಾಬಾದಿನತ್ತ ಹೊರಟಿದ್ದ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
Laxmi News 24×7