Breaking News

ವ್ಹೀಲಿಂಗ್ ವೇಳೆ ಮತ್ತೊಂದು ಬೈಕ್​ಗೆ ಡಿಕ್ಕಿ.. ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

Spread the love

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆಗೆ ರಜೆ ಸಿಕ್ಕಿರುವ ಹಿನ್ನೆಲೆ ನಂದಿಬೆಟ್ಟದ ರಸ್ತೆಯಲ್ಲಿ ವ್ಹೀಲಿಂಗ್ ಮಾಡಲು ಹೋದ ಯುವಕನೊಬ್ಬ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದು, ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಸಮೀಪ ಇಂದು ನಡೆದಿದೆ.

ಬೆಂಗಳೂರು ಮೂಲದ ಆದಿಲ್ (25) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಇಂದು ಸ್ವಾತಂತ್ರ್ಯ ದಿನಾಚರಣೆಯಾಗಿದ್ದು, ಬೆಂಗಳೂರಿನಿಂದ ಆಗಮಿಸುವ ಕೆಲವರು ಏರ್ಪೋರ್ಟ್​ ರಸ್ತೆ ಕಡೆ ಬಂದು ವ್ಹೀಲಿಂಗ್ ಮಾಡ್ತಾರೆ. ಹೀಗೆ ದೇವನಹಳ್ಳಿಯಿಂದ ನಂದಿಬೆಟ್ಟದ ರಸ್ತೆ ಕಡೆ ವ್ಹೀಲಿಂಗ್ ಮಾಡುವ ವೇಳೆ ಎದುರು ಬಂದ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದ ಹಿನ್ನೆಲೆ ಈ ಅವಘಡ ಸಂಭವಿಸಿದೆ‌. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ನಂದಿಬೆಟ್ಟದ ರಸ್ತೆಯಲ್ಲಿ ಹೆಚ್ಚಿದ ವ್ಹೀಲಿಂಗ್ ಹಾವಳಿಯಿಂದ ಈ ಅಪಘಾತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಡೆಡ್ಲಿ ಬೈಕ್​ ವ್ಹೀಲಿಂಗ್: ಇನ್ನು ಇದೇ ದೇವನಹಳ್ಳಿಯಿಂದ ನಂದಿಬೆಟ್ಟಕ್ಕೆ ತೆರಳುತ್ತಿದ್ದ ಯುವಕರಿಬ್ಬರು ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ.

ವ್ಹೀಲಿಂಗ್ ಮಾಡುತ್ತಿದ್ದ 26 ಮಂದಿ ವಿರುದ್ಧ ಕ್ರಮ : ಸಾರ್ವಜನಿಕ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ದ ನಗರದ ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಹಲವು ತಿಂಗಳುಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿದ್ದು, 26 ಪ್ರಕರಣ ದಾಖಲಿಸಿ, 26 ಮಂದಿ ಸವಾರರ ವಿರುದ್ಧ ಕ್ರಮ (ಜೂನ್ 18-2023) ಕೈಗೊಂಡಿದ್ದರು.

ವ್ಹೀಲಿಂಗ್ ಪ್ರಕರಣಗಳ ತಡೆಗೆ ಸಂಚಾರಿ ಪೊಲೀಸರ ಕ್ರಮ : ದಕ್ಷಿಣ ಸಂಚಾರ ಉಪ ವಿಭಾಗದ ವ್ಯಾಪ್ತಿಯ ಚಾಮರಾಜಪೇಟೆ 5ನೇ ಕ್ರಾಸ್, ಹನುಮಂತನಗರ 7ನೇ ಕ್ರಾಸ್, ಜೆ ಪಿ ನಗರ ಕೆಳಸೇತುವೆ, ಇಲಿಯಾಸ್ ನಗರ, ಕೆ ಎಸ್ ಲೇಔಟ್ ರಿಂಗ್ ರಸ್ತೆ, ಗುಬ್ಬಲಾಳ, ಅಂಜನಾಪುರ ಸೇರಿ ವಿವಿಧ ರಸ್ತೆಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುವ ಪ್ರವೃತ್ತಿ ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವ್ಹೀಲಿಂಗ್ ಪ್ರಕರಣಗಳ ತಡೆಗೆ ಮುಂದಾಗಿದ್ದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ