ರಾಮನಗರ: ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ. ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ. ಆದರೆ ಗಂಡಸರು ಟಿಕೆಟ್ ತಗೆದುಕೊಂಡು ಓಡಾಡಿ. ಕೆಎಸ್ಆರ್ ಟಿಸಿ ನಡಿಯಬೇಕಲ್ಲ, ಅದಕ್ಕೆ ಗಂಡಸರು ಟಿಕೆಟ್ ತಕೊಳ್ರಪ್ಪ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕಬ್ಬಾಳು ಗ್ರಾಮದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ ಎರಡು ಸಾವಿರ ಕೊಡುತ್ತೇವೆ. ಯಾರು ಯಜಮಾನಿ ಅಂತ ನೀವು ತೀರ್ಮಾನ ಮಾಡಿಕೊಳ್ಳಿ. ಜೂ.15ರಿಂದ ಜು.15ರ ವರೆಗೆ ಅರ್ಜಿ ಹಾಕೊಳ್ಳಿ. ಯಾರಿಗೂ ಲಂಚ ಕೊಡಬೇಡಿ. ಈ ಯೋಜನೆ ಜಾರಿಗೆ ತರಲು ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಿ. ಅವರನ್ನು ಒದ್ದು ಒಳಗೆ ಹಾಕುತ್ತೇವೆ ಎಂದರು.
ಗೃಹಲಕ್ಷ್ಮಿಗೆ ಹೆಣ್ಣುಮಕ್ಕಳ ಅಕೌಂಟ್ ನಂಬರನ್ನೇ ಕೊಡಬೇಕು. ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ 3ಸಾವಿರ ಕೊಡುತ್ತೇವೆ. ಇದಕ್ಕೂ ಯಾರೂ ಲಂಚ ಕೊಡುವಂತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತಂದಿರುವುದಕ್ಕೆ ನಿಮಗೆ ಕೊಡುತ್ತಿರುವವ ಯೋಜನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಇದೊಂದು ಐತಿಹಾಸಿಕವಾದ ದಿನ. ನಾನು ನಿಮ್ಮ ಉಪಕಾರ ಸ್ಮರಣೆ ನೆನೆಯಲು ಬಂದಿದ್ದೇನೆ. ನೀವು ಕೊಟ್ಟ ಶಕ್ತಿ ಸಾರ್ಥಕವಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ. ತಾಯಿ ಕಬ್ಬಾಳಮ್ಮ, ಕೆಂಕೆರಮ್ಮನ ಕೃಪೆಯಿಂದ ಆಶೀರ್ವಾದ ಮಾಡಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನಿನ್ಮ ತೀರ್ಪಿಗೆ ರಾಜ್ಯದ ಜನತೆ ಸಂತೋಷ ಪಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.