ಮುಂಬೈ: ಶಿವಸೇನಾದ ಏಕನಾಥ್ ಶಿಂದೆ ಬಣದ 22 ಶಾಸಕರು ಮತ್ತು 9 ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಶಿವಸೇನಾ ಉದ್ಧವ್ ಬಾಳಾಠಾಕ್ರೆ ಬಣದ(ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಜೆಪಿಯ ಮಲತಾಯಿ ಧೋರಣೆಯಿಂದ ಉಸಿರುಗಟ್ಟಿದ ವಾತಾವರಣದಲ್ಲಿ ಬೇಸತ್ತಿರುವ ಅವರು, ಶಿಂದೆ ಬಣವನ್ನು ತೊರೆಯಲಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.
ಶಿವಸೇನಾ ಉದ್ಧವ್ ಬಾಳಾಠಾಕ್ರೆ ಬಣದ(ಯುಬಿಟಿ) ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ, ಬಿಜೆಪಿಯಿಂದ ಮಲತಾಯಿ ಧೋರಣೆ ಎದುರಿಸುತ್ತಿದ್ದೇವೆ ಎಂಬ ಶಿವಸೇನಾ ಸಂಸದ ಗಜಾನನ ಕೀರ್ತಿಕಾರ್ ಅವರ ಹೇಳಿಕೆಯನ್ನು ಠಾಕ್ರೆ ಉಲ್ಲೇಖಿಸಿದ್ದಾರೆ.
2019ರಲ್ಲಿ ಇದೇ ರೀತಿಯ ಮಲತಾಯಿ ಧೋರಣೆಯನ್ನು ಸಹಿಸಲಾಗದೆ ನಮ್ಮ ಭದ್ರತೆ ಮತ್ತು ಆತ್ಮಾಭಿಮಾನವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡೆವು ಎಂದೂ ತಿಳಿಸಿದ್ದಾರೆ
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ 2019ರಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹೊರಬಂದು, ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು.
ಕಳೆದ ವರ್ಷ ಶಿವಸೇನಾದಲ್ಲಿ ಒಡಕು ಉಂಟಾಗಿ ಶಿಂದೆ ಬಣವು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿತು. ಏಕನಾಥ್ ಶಿಂದೆ ಮುಖ್ಯಮಂತ್ರಿಯಾದರು.
ಈ ನಡುವೆ, ಶುಕ್ರವಾರ ಹೇಳಿಕೆ ನೀಡಿರುವ ಶಿಂದೆ ಬಣದ ಸಂಸದ ಕೀರ್ತಿಕಾರ್, ‘ನಾವು ಎನ್ಡಿಎ ಭಾಗವಾಗಿದ್ದೇವೆ….ಆದ್ದರಿಂದ ನಮ್ಮ ಕೆಲಸವನ್ನು ಅದರಂತೆ ನಡೆಸಬೇಕು. ಎನ್ಡಿಎ ಅಂಗಪಕ್ಷಗಳ ಕ್ಷೇತ್ರಗಳಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ನಾವು ಬಯಸುತ್ತೇವೆ. ಆದರೆ, ನಮಗೆ ಇಲ್ಲಿ ಮಲತಾಯಿ ಧೋರಣೆ ತೋರಲಾಗುತ್ತಿದೆ’ ಎಂದು ದೂರಿದ್ದರು.
ಈ ಬಗ್ಗೆ ಸಾಮ್ನಾದಲ್ಲಿ ುಲ್ಲೇಖಿಸಿರುವ ಠಾಕ್ರೆ, ‘ಬಿಜೆಪಿಯ ಮಲತಾಯಿ ಧೋರಣೆಯಿಂದ ಶಿವಸೇನಾ ಶಿಂದೆ ಬಣದಲ್ಲಿರುವ 22 ಶಾಸಕರು ಮತ್ತು 9 ಸಂಸದರು ಉಸಿರುಗಟ್ಟಿದ ವಾತಾವರಣದಿಂದ ಬೇಸತ್ತಿದ್ದಾರೆ. ಆ ಬಣವನ್ನು ಬಿಟ್ಟು ಹೊರಬರಲು ಅವರು ಚಿಂತಿಸುತ್ತಿದ್ದಾರೆ’ ಎಂದೂ ತಿಳಿಸಿದ್ದಾರೆ.
ಶಿವಸೇನಾದ ಕೆಲ ಸಂಸದರು ಮತ್ತು ಶಾಸಕರು ಠಾಕ್ರೆ ಕುಟುಂಬಕ್ಕೆ ನಂಬಿಕೆ ದ್ರೋಹ ಮಾಡಿ ಬಿಜೆಪಿ ಕೈಜೋಡಿಸಿದ್ದರು. ಒಂದು ವರ್ಷದೊಳಗೆ ಅವರ ಪ್ರೇಮ ಸಂಬಂಧ ಮುರಿದುಬಿದ್ದಿದೆ. ವಿಚ್ಛೇದನದ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದೂ ಸಂಪಾದಕೀಯದಲ್ಲಿ ವ್ಯಂಗ್ಯ ಮಾಡಲಾಗಿದೆ.