ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ. ಇದು ಅತಿದೊಡ್ಡ ದೇಶ ವಿರೋಧಿ ಕೃತ್ಯ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಂಬತ್ತು ವರ್ಷ ಅಧಿಕಾರ ಪೂರ್ಣಗೊಳಿಸಿರುವುದರ ವಿರುದ್ಧ ಬುಧವಾರವೂ ಖರ್ಗೆ ವಾಗ್ದಾಳಿ ಮುಂದುವರಿಸಿದ್ದಾರೆ.
ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವುದು ದೇಶಕ್ಕೆ ದೊಡ್ಡ ಹಾನಿ. ಇದರಿಂದ ಭಾರತದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದ ಜನರು ಉದ್ಯೋಗಾವಕಾಶದಿಂದ ವಂಚಿತರಾಗುವಂತಾಗಿದೆ ಎಂದು ಖರ್ಗೆ ಟ್ವೀಟ್ನಲ್ಲಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅಸಮರ್ಥತೆ ಮತ್ತು ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ದೇಶದಾದ್ಯಂತ ಅಭಿಯಾನ ಆರಂಭಿಸಿದೆ. ಈ ನಡುವೆಯೇ ಸರ್ಕಾರದ ಒಂಬತ್ತು ವರ್ಷದ ಸಂಭ್ರಮಾಚರಣೆ ಅಂಗವಾಗಿ ದೇಶ ವ್ಯಾಪಿ ಬಿಜೆಪಿಯು ಒಂದು ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.