ಹುಬ್ಬಳ್ಳಿ: ‘ಕಷ್ಟ ಕಾಲದಲ್ಲಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಜೊತೆಯಿದ್ದು, ರಾಜ್ಯದಲ್ಲಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಇರಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯ ಮಧುರಾ ಎಸ್ಟೇಟ್ನಲ್ಲಿರುವ ಪ್ರಕಲ್ಪ ನಿವಾಸದಲ್ಲಿ ಬುಧವಾರ ಶೆಟ್ಟರ್ ಜೊತೆ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಶೆಟ್ಟರ್, ಸವದಿ, ಪುಟ್ಟಣ್ಣ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ, ಬಾಬುರಾವ್ ಚಿಂಚನಸೂರು ಅವರು ಪಕ್ಷ ಸೇರ್ಪಡೆಯಾಗಿದ್ದರಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪಕ್ಷ ಅವರ ಜೊತೆ ಇದೆ ಎನ್ನುವ ಹೈಕಮಾಂಡ್ ಸಂದೇಶವನ್ನು ಶೆಟ್ಟರ್ ಅವರಿಗೆ ತಲುಪಿಸಿದ್ದೇನೆ’ ಎಂದರು.
‘ಹಿಂದಿನ ಸರ್ಕಾರದ ತಪ್ಪುಗಳನ್ನು, ಪ್ರತಿಯೊಂದು ಹಂತದಲ್ಲಿಯೂ ನಾವು ಖಂಡಿಸಿ ಜನರ ಎದುರು ಇಟ್ಟಿದ್ದೆವು. ನಾಡಿನ ಜನತೆ ಬದಲಾವಣೆ ಬದಲಿಸಿ, ನಮಗೆ ಅವಕಾಶ ನೀಡಿದೆ. ದೇವರು ವರನೂ ಕೊಡುವುದಿಲ್ಲ, ಶಾಪನೂ ಕೊಡುವುದಿಲ್ಲ; ಅವಕಾಶ ನೀಡುತ್ತಾನೆ. ಇದೀಗ ನಮಗೆ ಆ ಅವಕಾಶ ದೊರಕಿದ್ದು, ಸಮರ್ಥವಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ’ ಎಂದರು.