ಹುಕ್ಕೇರಿ: ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 40 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಿ ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆ ಕಾಡುವುದಿಲ್ಲ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಸುಲ್ತಾನಪುರ ಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾದಗೂಡ, ಬೆಳವಿ, ಶೇಲಾಪುರ, ಹುಲ್ಲೋಳಿ ಹಟ್ಟಿ ಸೇರಿದಂತೆ ಒಟ್ಟು 21 ಕೆರೆಗಳಿಗೆ 42.50 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸಿ, 1050 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಪ್ರಾಯೋಗಿಕವಾಗಿ ಕೆರೆ ತುಂಬಿಸುವ ಸಂದರ್ಭದಲ್ಲಿ ಕೆಲ ರೈತರು ಪೈಪ್ಲೈನ್ ಒಡೆದು ತಮ್ಮ ಜಮೀನು ಮತ್ತು ಬಾವಿಗಳಿಗೆ ನೀರು ಹರಿಸಿಕೊಂಡಿದ್ದರಿಂದ ಕೆರೆಗಳಿಗೆ ನೀರು ಹರಿಸಲು ಸಾಕಷ್ಟು ಸಮಸ್ಯೆ ಆಗಿದೆ. ಈ ಬಾರಿ ಅಂತಹ ಘಟನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಯೋಜನೆ ಸಾಕಾರಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಇಇ ಎಸ್.ಎಸ್.ಗುಡ್ಡಾಕಾಯಿ, ಎ.ಇ.ಸಂತೋಷ ಜಾಗನೂರ, ಮುಖಂಡರಾದ ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಶಿವನಗೌಡ ಮದವಾಲ, ಮಹಾದೇವ ಪಾಟೀಲ, ಗೋಪಾಲ ಚನಗೌಡರ, ಬಸವಂತಪ್ಪ ರಡ್ಡಿ, ಗುರುಪಾದಯ್ಯ ಮಠಪತಿ, ಬಸವರಾಜ ತಳವಾರ, ಶಂಕರ ಭಡಗಾಂವಿ, ಈರಗೌಡ ಪಾಟೀಲ, ಸತಿಗೌಡ ಪಾಟೀಲ, ಅಭಿನವ ಪಾಟೀಲ, ಬಸವರಾಜ ಗಂಗಣ್ಣವರ ಇತರರಿದ್ದರು.
Laxmi News 24×7