ನವದೆಹಲಿ, ಜ.25- ನೇಣು ಕುಣಿಕೆಯಿಂದ ಪಾರಾಗಲು ಕುತಂತ್ರ ಮತ್ತು ಹೊಸ ಕ್ಯಾತೆಗಳನ್ನು ತೆಗೆಯುತ್ತಿರುವ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹಂತಕರಾದ ದೋಷಿಗಳಿಗೆ ಕಾನೂನು ಸಮರದಲ್ಲಿ ಮತ್ತೆ ಹಿನ್ನಡೆಯಾಗಿದೆ.ತಾವು ಕ್ಷಮಾದಾನ ಮತ್ತು ಕ್ಯುರೇಟಿವ್ (ಪರಿಹಾರಾತ್ಮಕ) ಅರ್ಜಿಗಳನ್ನು ಸಲ್ಲಿಸಲು ತಿಹಾರ್ ಜೈಲಿನ ಪೊಲೀಸ್ ಅಧಿಕಾರಿಗಳು ಸೂಕ್ತ ದಾಖಲೆ ಪತ್ರಗಳನ್ನು ನೀಡುತ್ತಿಲ್ಲ ಎಂದು ದೋಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇಂದು ಮುಂದಿನ ಯಾವುದೇ ನಿರ್ದೇಶನಗಳಿಗೆ ಆಸ್ಪದವಿಲ್ಲದಂತೆ ಅರ್ಜಿಗಳನ್ನು ವಿಲೇವಾರಿ ಮಾಡಿ ಈ ಕಾನೂನು ಪ್ರಕರಣಕ್ಕೆ ಅಂತ್ಯ ಹಾಡಿದೆ.
ಇದರಿಂದಾಗಿ ಅಕ್ಷಯ್ಕುಮಾರ್ ಸಿಂಗ್, ಪವನ್ ಗುಪ್ತ, ವಿನಯ್ಕುಮಾರ್ ಮತ್ತು ಮುಖೇಶ್ ಸಿಂಗ್ ಅವರಿಗೆ ಫೆ.1ರಂದು ಮುಂಜಾನೆ 6 ಗಂಟೆಗೆ ಮರಣ ದಂಡನೆ ವಿಧಿಸುವ ಕಾಲ ಸನ್ನಿಹಿತವಾಗಿದೆ. ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಅಜಯ್ಕುಮಾರ್ ಜೈನ್ ನೇತೃತ್ವದ ಪೀಠವು ವಿಚಾರಣೆ ನಡೆಸಿತು
ದೋಷಿಗಳಿಗೆ ಜೈಲಿನ ಸಿಬ್ಬಂದಿ ಆಹಾರದಲ್ಲಿ ನಿಧಾನವಾಗಿ ಸಾಯುವಂತೆ (ಸ್ಲೋ ಪಾಯ್ಸನ್) ವಿಷ ಬೆರೆಸಿದ್ದಾರೆ. ಈ ಕುರಿತು ವೈದ್ಯಕೀಯ ವರದಿಯನ್ನು ನೀಡಲು ಜೈಲಿನ ಅಧಿಕಾರಿಗಳು ಅಡ್ಡಿಯಾಗಿದ್ದಾರೆ ಎಂದು ವಕೀಲ ಎ.ಪಿ.ಸಿಂಗ್ ಆರೋಪಿಸಿದರು.
ಸರ್ಕಾರಿ ಅಭಿಯೋಜಕರು ಈ ವಾದವನ್ನು ತಳ್ಳಿ ಹಾಕಿದರು. ಜೈಲಿನ ಅಧಿಕಾರಿಗಳು ಮತ್ತು ಪೊಲೀಸರು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಯಾವುದೇದಾಖಲೆ ಪತ್ರಗಳು ಹಾಗೂ ದಸ್ತಾವೇಜುಗಳು ಬಾಕಿ ಇಲ್ಲ. ಗಲ್ಲು ಶಿಕ್ಷೆಯನ್ನು ವಿಳಂಬ ಮಾಡುವ ಉದ್ದೇಶದಿಂದ ವೃಥಾ ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು.
ವಾದ , ಪ್ರತಿ ವಾದಗಳನ್ನು ಆಲಿಸಿದ ನ್ಯಾಯಪೀಠ ದೋಷಿಗಳ ಪರ ವಕೀಲರು ಈ ಸಂಬಂಧ ಪೊಲೀಸರು ಈಗಾಗಲೇ ಸಲ್ಲಿಸಿರುವ ದಾಖಲೆ ಪತ್ರಗಳು ಮತ್ತು ಇತರ ದಸ್ತಾವೇಜುಗಳ ಪ್ರತಿಗಳನ್ನು ಪಡೆಯಬಹುದು. ಇನ್ನು ಈ ಪ್ರಕರಣದಲ್ಲಿ ಯಾವುದೇ ಮುಂದಿನ ನಿರ್ದೇಶನ ಅಥವಾ ಆದೇಶ ನೀಡುವ ಅಗತ್ಯವಿಲ್ಲ. ದೋಷಿಗಳ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಸ್ಪಷ್ಟ ಆದೇಶ ನೀಡಿದರು.