ಚಾಮರಾಜನಗರ: ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಹನೂರು ಪಟ್ಟಣದ ಹೊರ ವಲಯದ ಮಲೆಮಹದೇಶ್ವರ ಕ್ರೀಡಾಂಗಣದ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಗಾಯಗೊಂಡವರನ್ನು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜೋಸೆಫ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಇಂದು ಬೆಳಗ್ಗೆ 6:30ರ ಸುಮಾರಿಗೆ ಮಾರ್ಟಳ್ಳಿಯಿಂದ ಹನೂರಿಗೆ ಬೈಕಿನಲ್ಲಿ ಹೊರಟಿದ್ದರು. ಬೈಕ್ ಅಜ್ಜೀಪುರ ರಸ್ತೆಯ ಕ್ರೀಡಾಂಗಣದ ಬಳಿಯ ರಾಮಯ್ಯನ ಕೆರೆ ಹತ್ತಿರ ತಲುಪಿದಾಗ ರಸ್ತೆ ಬದಿಯಲ್ಲಿದ್ದ ಹಳೆಯ ಆಲದ ಮರ ಇದ್ದಕ್ಕಿದ್ದಂತೆ ಉರುಳಿ ಇವರ ಮೇಲೆ ಬಿದ್ದಿದೆ. ಇದರಿಂದ ಜೋಸೆಫ್ ಗಂಭೀರ ಗಾಯಗೊಂಡಿದ್ದು, ಕುಮಾರ್ ಕಾಲಿಗೆ ಗಾಯಗಳಾಗಿವೆ.ಈ ವೇಳೆ ಅದೆ ರಸ್ತೆಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ಜೆಡಿಎಸ್ ಮುಖಂಡ ಮಂಜೇಶ್ ಮತ್ತು ಸತೀಶ್ ಎಂಬುವರು ಮರದಡಿಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸವಾರರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರಸ್ತೆಯಲ್ಲಿ ಇನ್ನೂ ಕೆಲ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Laxmi News 24×7