ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಇದೇ 24ರವರೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಈ ಸಂಬಂಧ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಶುಕ್ರವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್.ಜಾಧವ್, ‘ಅರ್ಜಿದಾರರು ಸಾರ್ವಜನಿಕ ಸೇವಕರಿದ್ದು ಅವರ ಕುಟುಂಬದ ಸದಸ್ಯರನ್ನೂ ಈ ಪ್ರಕರಣದಲ್ಲಿ ಸಿಲುಕಿಸಿ ಕಿರುಕುಳ ನೀಡಲಾಗುತ್ತಿದೆ. ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಅವರ ರಾಜಕೀಯ ಶತ್ರುಗಳು ರಾಜಕೀಯ ಪಿತೂರಿ ಹೆಣೆದಿದ್ದಾರೆ’ ಎಂದು ದೂರಿದರು.
ಜಾಧವ್ ಅವರ ವಾದವನ್ನು ಬಲವಾಗಿ ಅಲ್ಲಗಳೆದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಅರ್ಜಿದಾರರು ಪ್ರಕರಣದ ತನಿಖೆಗೆ ತಡೆ ಕೇಳುತ್ತಿಲ್ಲ. ಅವರು ಕೇಳುತ್ತಿರುವುದು ಕೇವಲ ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆಸಬಾರದು ಎಂದಷ್ಟೇ. ನಾವು ಅವರ ಕುಟುಂಬದ ಸದಸ್ಯರಿಗೆ ನೋಟಿಸ್ ನೀಡಿಯೇ ಇಲ್ಲ. ಕಾಲೇಜಿನ ಪ್ರಿನ್ಸಿಪಾಲರನ್ನು ಕರೆದು ವಿಚಾರಣೆ ನಡೆಸಿದರೆ ಅವರು ಹೇಗೆ ಕುಟುಂಬದ ಸದಸ್ಯರಾಗುತ್ತಾರೆ’ ಎಂದು ಪ್ರಶ್ನಿಸಿದರು.
‘ಶಿವಕುಮಾರ್ ಮಗಳಿಗೀಗ 21 ವರ್ಷ. ಆಕೆ ₹ 150 ಕೋಟಿಯ ಒಡತಿ. ಈಕೆಗೇನು ದುಡ್ಡು ಆಕಾಶದಿಂದ ಉದುರುತ್ತಾ’ ಎಂದು ಖಾರವಾಗಿಯೇ ಪ್ರಶ್ನಿಸಿದರು. ‘ಶಿವಕುಮಾರ್ ಕುಟುಂಬದ ಸದಸ್ಯರನ್ನು ಇನ್ನು ಮುಂದೆ ವಿಚಾರಣೆಗೆ ಕರೆಯುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡ್ತೀವಿ. ಆರೋಪಿಗಳನ್ನು ಬಂಧಿಸಬಾರದು ಅಂತಾ ಈ ಹಿಂದೆಯೇ ಏಕಸದಸ್ಯ ನ್ಯಾಯಪೀಠದ ಆದೇಶವಿದೆ. ಅರ್ಜಿದಾರರು ಈ ಮೊದಲೇ ತಡೆ ಕೋರಿದ್ದ ಮನವಿಯನ್ನು ಹೈಕೋರ್ಟ್ ಆರಂಭದಲ್ಲೇ ತಿರಸ್ಕರಿಸಿದೆ. ತನಿಖೆ ಶುರುವಾಗಿ ಎರಡೂವರೆ ವರ್ಷ ಕಳೆದಿದೆ. ಈಗಲೂ ಕೂಡಾ ತಡೆ ಕೋರಿ ಯಾವುದೇ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿಲ್ಲ. ಆದರೂ, ತಾವು ತಡೆ ಕೊಡುತ್ತಿದ್ದೀರಿ. ಕೊಡಬೇಡಿ, ತನಿಖೆ ಈಗ ಕೊನೆಯ ಹಂತದಲ್ಲಿದೆ. ನಾವು ಇನ್ನು ಆರು ತಿಂಗಳಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುತ್ತೇವೆ’ ಎಂದರು.
ಆದರೆ, ನ್ಯಾಯಪೀಠವು ಸಿಬಿಐನ ಯಾವುದೇ ವಾದಾಂಶವನ್ನು ಲೆಕ್ಕಿಸದೆ, ‘ಇದರಲ್ಲಿ ಸೂಕ್ಷ್ಮವಾದ ಕಾನೂನಾತ್ಮಕ ಅಂಶಗಳಿವೆ’ ಎಂದು ಪ್ರತಿಪಾದಿಸಿತು. ‘ತನಿಖೆಯ ಪ್ರಗತಿ ವರದಿಯನ್ನು ಕೋರ್ಟ್ಗೆ ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.
ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ‘ಸಿಬಿಐ ದಾಖಲಿಸಿರುವ ಈ ಎಫ್ಐಆರ್ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.