ಬೆಳಗಾವಿಯ ಭಾಗ್ಯನಗರದಲ್ಲಿ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ನಾಲ್ಕು ಜನರ ಗುಂಪು ಹಲ್ಲೆ ಮಾಡಿದ ಘಟನೆ ಖಂಡಿಸಿ ಹಲ್ಲೆ ಮಾಡಿದ ನಾಲ್ವರೂ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಂಬಂಧಿಕರು ಮತ್ತು ಇಲ್ಲಿನ ನಿವಾಸಿಗಳು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಹೌದು ಮಂಗಳವಾರ ರಾತ್ರಿ ಭಾಗ್ಯನಗರದ ಮೊದಲನೇ ಕ್ರಾಸ್ನಲ್ಲಿ ಮನೆಯಿಂದ ಕಸ ಚೆಲ್ಲಲು ಹೊರಗಡೆ ಬಂದಿದ್ದ ಇಲ್ಲಿನ ನಿವಾಸಿ ಅಶೀಶ್ ಶೇಣವಿ ಕೈ ಆಯತಪ್ಪಿ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಕೈಗೆ ತಾಗಿದೆ. ಇದನ್ನೇ ದೊಡ್ಡದು ಮಾಡಿದ ಆ ಬೈಕ್ನಲ್ಲಿ ಯುವಕರು ತಮ್ಮ ಸ್ನೇಹಿತರನ್ನು ಕರೆಸಿ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. ದೊಡ್ಡ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದಿದ್ದರು.
ಅಷ್ಟೇ ಅಲ್ಲದೇ ಆತನ ಕಣ್ಣಿಗೂ ಪೆಟ್ಟಾಗಿ ರಕ್ತಸ್ರಾವವಾಗಿದೆ. ಈ ವೇಳೆ ಸ್ಥಳೀಯರು ಜಮಾಯಿಸುತ್ತಿದ್ದಂತೆ ಅಲ್ಲಿಂದ ಹಲ್ಲೆಕೋರರು ಎರಡೂ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಶೀಶ್ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಈ ಘಟನೆ ಭಾಗ್ಯನಗರ ನಿವಾಸಿಗಳ ಆತಂಕಕ್ಕೆ ಕಾರಣವಾಗಿತ್ತು. ಈ ಸಂಬಂಧ ಶುಕ್ರವಾರ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿದ ಅಶೀಶ್ ಕುಟುಂಬಸ್ಥರು ಮತ್ತು ಇಲ್ಲಿನ ಸ್ಥಳೀಯರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಿರಿ, ಅದೇ ರೀತಿ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.