ಬೆಂಗಳೂರು: ನವೆಂಬರ್ 2ರಿಂದ 4ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಪ್ರದರ್ಶಿಸಲು ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಯತ್ನಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಡೆಯೊಡ್ಡಿದ್ದಾರೆ.
ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯದ ಲಭ್ಯತೆ ಮತ್ತಿತರ ಅಂಶಗಳನ್ನು ವಿವರಿಸುವ ಐದು ನಿಮಿಷಗಳ ಕಿರುಚಿತ್ರ ನಿರ್ಮಿಸಿ, ಜಿಮ್ನಲ್ಲಿ ಪ್ರದರ್ಶಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿತ್ತು. ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಯೊಂದರ ಜತೆ ಇಲಾಖೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ತ್ರಿ-ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕಿರುಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು.
ದುಬಾರಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸುವ ಪ್ರಸ್ತಾವದ ಕುರಿತು ಕೈಗಾರಿಕಾ ಸಚಿವರಿಗೆ ಅಧಿಕಾರಿಗಳು ಮಾಹಿತಿಯನ್ನೇ ನೀಡಿರಲಿಲ್ಲ. ತಮ್ಮ ಹಂತದಲ್ಲೇ ನಿರ್ಧಾರ ಕೈಗೊಂಡಿರುವ ಅಧಿಕಾರಿಗಳು, ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆಯ್ಕೆಮಾಡಿ, ಒಪ್ಪಂದ ಮಾಡಿಕೊಂಡಿದ್ದರು. ಗೋಪ್ಯವಾಗಿ ಈ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಇದೇ 21ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಪತ್ರ ಬರೆದಿರುವ ಸಚಿವರು, ಕಿರುಚಿತ್ರ ನಿರ್ಮಾಣ ಯೋಜನೆ ರದ್ದು ಮಾಡುವಂತೆ ಸೂಚಿಸಿದ್ದಾರೆ.
‘₹ 4.5 ಕೋಟಿ ವೆಚ್ಚದಲ್ಲಿ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕೆ ಚಿತ್ರ ನಿರ್ಮಾಣ ಸಂಸ್ಥೆಯೊಂದರ ಜತೆ ಕೈಗಾರಿಕಾ ಇಲಾಖೆಯು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ. ಕಿರುಚಿತ್ರ ನಿರ್ಮಾಣಕ್ಕೆ ನಿಗದಿಪಡಿಸಿರುವ ಈ ಮೊತ್ತವು ತುಂಬಾ ಹೆಚ್ಚಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಇದು ಅನಗತ್ಯ ಮತ್ತು ಸೂಕ್ತವಾಗಿರುವುದಿಲ್ಲ. ಇಲಾಖೆಯು ಇಂತಹ ಒಪ್ಪಂದ ಮಾಡಿಕೊಂಡಿದ್ದಲ್ಲಿ ಕಾರ್ಯಾದೇಶವನ್ನು ವಜಾ ಮಾಡಲು ಸೂಚಿಸಿದೆ’ ಎಂದು ನಿರಾಣಿ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.