ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಶುಕ್ರವಾರ ಬೆಂಗಳೂರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಪತ್ರಿಕಾ ಗೋಷ್ಠಿಯೊಂದರಲ್ಲಿ (Press Conference) ಮಾತಾಡಿದ ಸಿದ್ದರಾಮಯ್ಯನವರು ಮೋದಿಯವರು ಪ್ರಧಾನಿಯಾದ ಬಳಿಕ ದೇಶವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಭಾರತದ ಸಾಲ ರೂ. 53,11,000 ಕೋಟಿಗಳಷ್ಟಿತ್ತು. ಪ್ರಧಾನಿ ಮೋದಿ ಅವರ ಅಧಿಕಾರಾವಧಿಯ ಏಳೂವರೆ-ಎಂಟು ವರ್ಷಗಳಲ್ಲಿ ಭಾರತದ ಸಾಲ ರೂ. 135,78,000 ಕೋಟಿ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಜನರಿಗೆ ಹೇಳುತ್ತಾ ಮೋದಿಯವರು ಭಾರತ ದೇಶವನ್ನು ಸಾಲದ ಕೂಪದಲ್ಲಿ ದೂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನಂತರ ದೆಹಲಿಯ ಹೊರವಲಯದ ಸಿಂಘುನಲ್ಲಿ ರೈತರು ನಡೆಸಿದ ಸುದೀರ್ಘಾವಧಿಯ ಧರಣಿ ಬಗ್ಗೆ ಸಿದ್ದರಾಮಯ್ಯ ಮಾತಾಡಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಕೃಷಿ ನಿಯಮಗಳ ವಿರುದ್ಧ ರೈತರು ಎಡಬಿಡದೆ 13 ತಿಂಗಳು ಸತ್ಯಾಗ್ರಹ ನಡೆಸಿದರು. ಕೇವಲ ಕಾರ್ಪೊರೇಟ್ ಜನರ ಹಿತದೃಷ್ಟಿಯಿಂದ ರೂಪಿಸಲಾಗಿದ್ದ ಕಾಯ್ದೆಗಳನ್ನು ಹಿಂಪಡೆಯುವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ರೈತರ ಆಗ್ರಹಕ್ಕೆ ಮಣಿದ ಪ್ರಧಾನಿಗಳು ಅವುಗಳನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದರು. ಆದರೆ, ಅಷ್ಟರಲ್ಲಿ 702 ರೈತರು ಪ್ರಾಣಕಳೆದುಕೊಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.ತಾನು ಘೋಷಿಸಿದ್ದ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ಸು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಿದ್ದು ಅದರ ಸೋಲು ಮತ್ತು ರೈತರಿಗೆ ದಕ್ಕಿದ ದೊಡ್ಡ ಗೆಲುವು ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಾನ ಮರ್ಯಾದೆ ಇದ್ದರೆ, ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.