ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರ ವಿರೋಧಿ ಮಸೂದೆ ಸೇರಿದಂತೆ ವಿವಿಧ ನೀತಿಗಳ ವಿರುದ್ಧ ಕಿಸಾನ್ ಮೋರ್ಚಾದಿಂದ ಸೆಪ್ಟೆಬರ್ 27ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಬಸ್ ಗಳ ಮೇಲೆ ಉಂಟಾಗುವಂತ ದಾಳಿ, ಹಾನಿ ತಪ್ಪಿಸಲು ಕೆ ಎಸ್ ಆರ್ ಟಿ ಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ದಿನಾಂಕ 27-09-2021ರಂದು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ, ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
- ದಿನಾಂಕ 27-09-2021ರಂದು ಭಾರತ್ ಬಂದ್ ಸಮಯದಲ್ಲಿ ವಾಹನಗಳನ್ನು ಜಖಂ ಉಂಟು ಮಾಡುವ, ನಿಷ್ಠಾವಂತ ಕಾರ್ಮಿಕರುಗಳಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಬೆದರಿಕೆ, ಹಲ್ಲೆ ಎಸಗುವ ಸಾಧ್ಯತೆ ಇರುವುದಲ್ಲದೇ, ವಿಭಾಗೀಯ ಕಚೇರಿ, ಘಟಕ, ಕಾರ್ಯಾಗಾರ, ಬಸ್ ನಿಲ್ದಾಣಗಳಿಗೆ ಧಕ್ಕೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡುವುದು.
- ಸೆ.27ರಂದು ಬೆಳಿಗ್ಗೆ 6 ಗಂಟೆಯಿಂದ ಹೊರಡುವ ವಾಹನಗಳ ಸುರಕ್ಷತೆಯಿಂದ ಹಿಡಿದು, ಘಟಕಕ್ಕೆ ವಾಪಾಸ್ ಆಗುವವರೆಗೆ ವಾಹನಗಳ ಬಗ್ಗೆ ಹೆಚ್ಚಿನ ನಿಗಾವಹಿಸುವುದು.
- ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಂಪರ್ಕವನ್ನು ಇಟ್ಟುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸುವುದು
- ಚಾಲಕ, ನಿರ್ವಾಹಕರಿಗೆ ಯಾವುದೇ ಸಂದರ್ಭಗಳಲ್ಲಿ ವಾಹನಗಳು ಜಖಂಗೆ ಒಳಪಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸುವುದು.
- ಬಂದ್ ನ ಸಮಯದಲ್ಲಿ ವಾಹನಗಳು ಜಖಂಗೆ ಒಳಪಟ್ಟ ಬಗ್ಗೆ ಪೊಲೀಸ್ ಠಾಣೆಗಳಿಗೆ ನೀಡಿರುವ ದೂರುಗಳ, ದಾಖಲಿಸಿದ ಪ್ರಕರಣಗಳ ಬಗ್ಗೆ, ಕಿ.ಮೀ ರದ್ದತಿ, ಸಾರಿಗೆ ಆದಾಯದ ನಷ್ಟ ಹಾಗೂ ಇನ್ನಿತರ ಅಹಿತಕರ ಘಟನೆಗಳ ವಿವರಗಳನ್ನು ಪ್ರಸ್ತಾಪಿಸಿ ಪ್ರತ್ಯೇಕ ವರದಿ ನೀಡುವಂತೆ ಸೂಚಿಸಿದ್ದಾರೆ.