ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು , ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ನಾಯಕರು ನಡೆಸಿದ ತಂತ್ರಗಾರಿಕೆ ಫಲಿತಾಂಶ ತಿಳಿಯಲಿದೆ
ನಗರದ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ ನಡೆಯಲಿದೆ. ಈಗಾಗಲೇ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ.
ಎಲ್ಲ ಸ್ಥಾನಗಳನ್ನು ಅವಿರೋಧ ಆಯ್ಕೆ ಗೊಳಿಸಬೇಕೆಂದು ಬಿಜೆಪಿ ನಾಯಕರು ಕಸರತ್ತು ನಡೆಸಿದರು, ಆದರೆ ಅದು ಸಾಧ್ಯವಾಗಲಿಲ್ಲ. ಆದರಿಂದ ನ.6 ರಂದು ಮೂರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಹಿನ್ನಲೆ ಇಂದು ಚುನಾವಣೆ ನಡೆಯಲಿದೆ.
ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಖಾನಾಪುರ, ರಾಮದುರ್ಗ ಮತ್ತು ನೇಕಾರರ ಸಹಕಾರ ಸಂಘಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆಯಲಿದೆ.
ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಶಾಸಕಿ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ರಾಮದುರ್ಗದಿಂದ ಭೀಮಪ್ಪ ಬೆಳವಣಿಕಿ ಮತ್ತು ಶ್ರೀಕಾಂತ ಡವಣ, ನೇಕಾರರ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣ ಅನಗೋಳಕೆ ಮಧ್ಯೆ ಸ್ಪರ್ಧೆ ಏರ್ಪಟಿದೆ.
ಎಲ್ಲರ ಚಿತ್ತ ಖಾನಾಪುರದತ್ತ : ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಎಂಇಎಸ್ ಮುಖಂಡ ಅರವಿಂದ ಪಾಟೀಲ ಅವರಿಗೆ ಪ್ರತಿಷ್ಠೆ, ಅಸ್ತಿತ್ವದ ಪ್ರಶ್ನೆಯಾಗಿದೆ.
ಮೂರು ಸ್ಥಾನಗಳ ಪೈಕಿ ಖಾನಾಪುರ ನಿರ್ದೇಶಕರ ಸ್ಥಾನಕ್ಕೆ ಕಳೆದ ಹದಿನೈದು ದಿನಗಳಿಂದ ತಂತ್ರಗಾರಿಕೆಯೊಂದಿಗೆ ತೀವ್ರ ಪೈಪೋಟಿ ನಡೆದಿದೆ. ಆದ ಕಾರಣ ಜಿಲ್ಲೆ ಜನರ ಚಿತ್ತ ಖಾನಾಪುರ ಕ್ಷೇತ್ರದತ್ತ ಇದೆ. ಒಟ್ಟಾರೆ ಇಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿ, ಪ್ರತಿಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ.