ಬೆಳಗಾವಿ: ‘ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದಾಗಿ, ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಯಬಾಗದ ಕುಡಚಿ-ಉಗಾರ ಸೇತುವೆ ಶುಕ್ರವಾರ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ರಾಯಬಾಗ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳ ಜನ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.
ಸೇತುವೆ ಜಲಾವೃತವಾಗಿರುವುದನ್ನು ತಹಶೀಲ್ದಾರ್ ಚಂದ್ರಕಾಂತ ಭಂಜತ್ರಿ ಪರಿಶೀಲಿಸಿದರು.
‘ಸತತ ಮಳೆಯಿಂದಾಗಿ ತಾಲ್ಲೂಕಿನ ಪ್ರಮುಖ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು. ವಿವಿಧ 11 ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. 25 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ವರದಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.
ನಂತರ ಪರಿಹಾರ ದೊರೆಯಲಿದೆ’ ಎಂದು ತಿಳಿಸಿದರು.
ಉಪ ತಹಶೀಲ್ದಾರ ಐ.ಕೆ. ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ಹನುಮಂತ ದಶವಂತ ಇದ್ದರು.