ತಾನು ಬಂದರೆ ಭಾರತದಲ್ಲಿ ಕೊರೊನಾ ಹರಡಬಹುದೆಂದು ಚೀನಾದಲ್ಲೇ ಉಳಿದ ಕನ್ನಡಿಗ!
ಕೊರೊನಾ ವೈರಸ್ಗೆ ಇಡೀ ಚೀನಾ ದೇಶ ತತ್ತರಿಸಿದ್ದು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಲ್ಲಿ ನೆಲೆಸಿದ್ದ ವಿವಿಧ ದೇಶಗಳ ಪ್ರಜೆಗಳು ಜೀವ ಭಯದಿಂದ ಸ್ವದೇಶಕ್ಕೆ ಮರಳುತ್ತಿದ್ದಾರೆ. ಅಂತಹದರಲ್ಲಿ ತಾನು ಸ್ವದೇಶಕ್ಕೆ ಮರಳಿದರೆ ತನ್ನೊಂದಿಗೆ ವೈರಸ್ ಕೂಡ ತನ್ನ ದೇಶಕ್ಕೆ ಬರಬಹುದು ಎಂಬ ಭೀತಿಯಿಂದ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕನ್ನಡಿಗನೊಬ್ಬ ಚೀನಾದಲ್ಲೇ ಉಳಿದುಕೊಂಡಿದ್ದಾನೆ!
ತುಮಕೂರಿನ ಶಿಕ್ಷಕ ಹೊಸಕೆರೆ ರಿಜ್ವಾನ್ ಭಾಷಾ ಅವರ ಕಿರಿಯ ಪುತ್ರ ಸಾಹಿಲ್ ಹುಸೇನ್ ಕಳೆದ ಮೂರು ವರ್ಷಗಳಿಂದ ಚೀನಾದ ವಾನ್ಲಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿನ ನಾಚಂಗ್ ಸಿಟಿಯ ‘ಜಿಯಾಂಗ್ಸಿ ಯೂನಿವರ್ಸಿಟಿ ಆಫ್ ಟ್ರಡಿಷನಲ್ ಅಂಡ್ ಚೈನೀಸ್ ಮೆಡಿಸಿನ್ಸ್’ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅವರು 3ನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದಾಗಿ ಅವರು ಓದುತ್ತಿರುವ ವಿಶ್ವವಿದ್ಯಾಲಯದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿ ತ್ಯಜಿಸಿದ್ದು, ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದ್ದಾರೆ. ಸದ್ಯಕ್ಕೆ ವಿವಿ ಶೇ.90ರಷ್ಟು ಖಾಲಿಯಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿದ ತಂದೆ ರಿಜ್ವಾನ್ ಭಾಷಾ, ತಕ್ಷಣವೇ ಭಾರತಕ್ಕೆ ಮರಳುವಂತೆ ತಿಳಿಸಿದ್ದಾರೆ. ತಂದೆಯ ಆಹ್ವಾನ ನಿರಾಕರಿಸಿದ ಸಾಹಿಲ್, ‘ಸದ್ಯಕ್ಕೆ ನಾನಿಲ್ಲಿ ಕ್ಷೇಮವಾಗಿದ್ದೇನೆ. ಭಾರತಕ್ಕೆ ಪ್ರಯಾಣಿಸುವ ವೇಳೆಯೇ ಕೊರೊನಾ ವೈರಸ್ ತಗುಲಿ, ತನ್ನ ಮೂಲಕ ಭಾರತ ಪ್ರವೇಶಿಸಬಹುದು. ಹೀಗಾಗಿ ಚೀನಾದಲ್ಲೇ ಉಳಿಯುತ್ತೇನೆ’ ಎಂದಿದ್ದಾರೆ.
ಭಾರತಕ್ಕೆ ಮರಳುವಂತೆ ಪೋಷಕರು ಹಾಗೂ ಸ್ನೇಹಿತರ ಒತ್ತಾಯದ ಪರಿಣಾಮ ಸಾಹಿಲ್ ಹುಸೇನ್, 14 ನಿಮಿಷಗಳ ವಿಡಿಯೋ ಮಾಡಿ ಕಳುಹಿಸುವ ಮೂಲಕ ತನ್ನ ಕ್ಷೇಮ ಸಮಾಚಾರ ತಿಳಿಸಿದ್ದಾರೆ. ತಾನಿರುವ ಹಾಸ್ಟೆಲ್ ಕೊಠಡಿಯಿಂದ ಸರ್ಜಿಕಲ್ ಮಾಸ್ಕ್ ಧರಿಸಿ ಹೊರಡುವ ಆತ, ಇಡೀ ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತಾಡಿ, ಅಲ್ಲಿನ ಪರಿಸ್ಥಿತಿಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
Laxmi News 24×7