ಚಿತ್ರದುರ್ಗ: ಜಿಲ್ಲೆಯಲ್ಲಿ 5034 ಕೋವಿಡ್ ಸೋಂಕಿತರಿದ್ದು, ರಾಜ್ಯಕ್ಕೆ ಹೋಲಿಸಿದಾಗ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೇಟ್ ಶೇ. 9.70 ಇದೆ. ಮರಣ ಪ್ರಮಾಣ ಶೇ. 0.65 ಹಾಗೂ ಗುಣಮುಖರಾದವರ ಪ್ರಮಾಣ ಶೇ. 75.66 ಇದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಎಲ್ಲರಿಗೂ ಜಿಲ್ಲಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲುಸಾಧ್ಯವಿಲ್ಲ. ಕೋವಿಡ್ ರೋಗ ಲಕ್ಷಣ ಇಲ್ಲದವರು ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು.
ಇದರಿಂದ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಗಂಭೀರ ಪ್ರಕರಣಗಳಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್ಗಳನ್ನು ಮೀಸಲಿಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರ್ಟಿಪಿಸಿಆರ್ ಲ್ಯಾಬ್ ಪ್ರಾರಂಭಮಾಡಲಾಗಿದ್ದು, ಪ್ರತಿ ದಿನ 300 ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1255 ಸಕ್ರಿಯ ಪ್ರಕರಣಗಳಿದ್ದು, 51,708 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ನಲ್ಲಿ 121, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 115, ಡಿಸಿಎಚ್ನಲ್ಲಿ 54 ಹಾಗೂ 873 ಜನ ಮನೆಯಲ್ಲಿಯೇ ಚಿಕಿತ್ಸೆಪಡೆಯುತ್ತಿದ್ದಾರೆ. ಈವರೆಗೆ 33 ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ 18 ಜನರುವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. 15 ಜನ 60 ವರ್ಷಕ್ಕಿಂತ ಕಡಿಮೆ ವಯೋಮಾನದವರು ಎಂದು ಮಾಹಿತಿ ನೀಡಿದರು.
ಕೋವಿಡ್ ರೋಗಕ್ಕೆ ಚಿಕಿತ್ಸೆ ನೀಡಲು 35 ಪರಿಣಿತ ವೈದ್ಯರು, 184 ವೈದ್ಯರು, 450 ಶುಶ್ರೂಷಕಿಯರು, 80 ಲ್ಯಾಬ್ ಟೆಕ್ನಿಷಿಯನ್, 600 ಗ್ರೂಪ್ ಡಿ ನೌಕರರು, 150 ಎಂಟ್ರಿ ಅಪರೇಟರ್, 110 ಫಾರ್ಮಸಿಸ್ಟ್, 34 ಆಂಬ್ಯುಲೆನ್ಸ್, 108 ಆಂಬ್ಯುಲೆನ್ಸ್ 26 ಇವೆ. ಜಿಲ್ಲೆಯಲ್ಲಿ ಔಷಧಕ್ಕೆ ಕೊರತೆಯಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ 20 ಕೋವಿಡ್ ಕೇರ್ ಸೆಂಟರ್ಗಳಿದ್ದು (ಸಿಸಿಸಿ), ಯಾವುದೇ ರೋಗ ಲಕ್ಷಣಗಳಿಲ್ಲದ ಕೋವಿಡ್ -19 ಸೋಂಕು ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 1054 ಪ್ರಕರಣಗಳಿದ್ದು, ಹಾಸ್ಟೆಲ್,ಸಮುದಾಯ ಭವನ, ಲಾಡ್ಜ್ಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ ಡಾಕ್ಟರ್, ಶುಶ್ರೂಷಕಿ, ಗ್ರೂಪ್ ಡಿ ಸಿಬ್ಬಂದಿ ಇದ್ದು, ಇಲ್ಲಿ ಆಹಾರ, ಔಷ ಧವನ್ನು ಪೂರೈಸಲಾಗುತ್ತಿದೆ. 14 ದಿನ ಕೋವಿಡ್ ಕೇರ್ ಸೆಂಟರ್ನಲ್ಲಿದ್ದು ಗುಣಮುಖರಾದ ನಂತರ 7 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರುವುದು ಕಡ್ಡಾಯ ಎಂದರು.
ಸಿಸಿಸಿಯಲ್ಲಿ ಒಟ್ಟು 1140 ಆಕ್ಸಿಜನ್ ಬೆಡ್ಗಳಿವೆ. ಪ್ರಸ್ತುತ 121 ಜನರು ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಸಿಸಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಡಿಸಿಎಚ್ ಸಿಗೆ (ಡಿಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್) ರವಾನಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 17 ಡಿಸಿಎಚ್ಸಿಗಳಿವೆ. ಇಲ್ಲಿ ಪಾಸಿಟಿವ್ ಮೈಲ್ಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಆಹಾರ ಮತ್ತು ಔಷ ಧ ವಿತರಣೆಯ ಸೌಲಭ್ಯಗಳಿರುತ್ತವೆ. ಜೊತೆಗೆ ಆಕ್ಸಿಜನ್ ಬೆಡ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ. ಪ್ರತಿ ತಾಲೂಕಿನಲ್ಲಿ 50 ಬೆಡ್ಗಳಂತೆ ಆಕ್ಸಿಜನ್ ಬೆಡ್ಗಳ ಸೌಲಭ್ಯವನ್ನು ಒದಗಿಸಲಾಗಿದೆ. ಒಟ್ಟು 250 ಆಕ್ಸಿಜನ್ ಬೆಡ್ ಸೌಲಭ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಡಿಎಚ್ಒ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ತುಳಸಿರಂಗನಾಥ್ ಇದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??