Breaking News

ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ: ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ : ಮಳೆಯಿಂದಾಗಿ ನೆರೆಯ ಭೀತಿ ಅನುಭವಿಸುತ್ತಿರುವ ಘಟಪ್ರಭಾ ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಮಂಗಳವಾರದಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಾಶ್ರಿತ ಕುಟುಂಬಗಳಿಗೆ ಗಂಜಿ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿರುವುದಾಗಿ ಹೇಳಿದ್ದಾರೆ.

 

ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಬಳೋಬಾಳ, ಬೀರನಗಡ್ಡಿ, ಮಸಗುಪ್ಪಿ, ವಡೇರಹಟ್ಟಿ, ಹುಣಶ್ಯಾಳ ಪಿಜಿ, ಪಟಗುಂದಿ, ನಲ್ಲಾನಟ್ಟಿ, ಮುನ್ಯಾಳ, ಹಡಗಿನಾಳ, ರಂಗಾಪೂರ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರಾಶ್ರಿತ ಕುಟುಂಬಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 1500 ಕ್ಕೂ ನಿರಾಶ್ರಿತರು ಗಂಜಿ ಕೇಂದ್ರಗಳಲ್ಲಿ ವಾಸವಿದ್ದಾರೆ. ನಿರಾಶ್ರಿತ ಕುಟುಂಬಗಳಿಗೆ ಮಾಸ್ಕ್‍ಗಳು ಹಾಗೂ ಸ್ಯಾನಿಟೈಜರ್‍ನ್ನು ನೀಡಲಾಗಿದೆ. ಢವಳೇಶ್ವರ, ಅರಳಿಮಟ್ಟಿ, ಬೀಸನಕೊಪ್ಪ, ಭೈರನಟ್ಟಿ, ಬಸಳಿಗುಂದಿ, ತಳಕಟ್ನಾಳ, ಖಂಡ್ರಟ್ಟಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಂಜಿ ಕೇಂದ್ರಗಳ ಜವಾಬ್ದಾರಿಯನ್ನು ಟೀಂ ಎನ್‍ಎಸ್‍ಎಫ್ ನೋಡಿಕೊಳ್ಳುತ್ತಿದ್ದು, ನದಿ ತೀರದ ಎಲ್ಲ ಗ್ರಾಮಗಳಿಗೆ ಟೀಂ ಎನ್‍ಎಸ್‍ಎಫ್ ಭೇಟಿ ನೀಡಿ, ನಿರಾಶ್ರಿತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಈ ತಂಡದ ಜೊತೆಗೆ ಸಂಬಂಧಿಸಿದ ಅಧಿಕಾರಿಗಳು ಸಹ ಜೊತೆಗಿರುವರು ಎಂದು ಹೇಳಿದ್ದಾರೆ.

ಗಂಜಿ ಕೇಂದ್ರಗಳಲ್ಲಿ ಕೋವಿಡ್ ನಿಯಮ ಪಾಲಿಸಿ : ದಿನೇ ದಿನೇ ಭಯಂಕರವಾಗಿ ಕಾಡುತ್ತಿರುವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಗಳಲ್ಲಿ ವಾಸವಿರುವ ನಿರಾಶ್ರಿತರು ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ಸ್ಯಾನಿಟೈಜರ್ ಬಳಸಬೇಕೆಂದು ಅವರು ಕೋರಿದ್ದಾರೆ.

ಮಂಗಳವಾರ ಬೆಳಗಿನ ಮಾಹಿತಿಯಂತೆ ಘಟಪ್ರಭಾ ನದಿಗೆ 82295 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಲ್ಲಿ ಹಿರಣ್ಯಕೇಶಿ ನದಿಯಿಂದ 18056 ಕ್ಯೂಸೆಕ್ಸ್, ಮಾರ್ಕಂಡೇಯ ನದಿಯಿಂದ 10925 ಕ್ಯೂಸೆಕ್ಸ್, ಬಳ್ಳಾರಿ ನಾಲೆಯಿಂದ 15100 ಕ್ಯೂಸೆಕ್ಸ್ ಮತ್ತು ಹಿಡಕಲ್ ಜಲಾಶಯದಿಂದ 38214 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಆದಾಗ್ಯೂ ಕಳೆದ ವರ್ಷದಲ್ಲಿ ಸಂಭವಿಸಿದ ಪ್ರವಾಹದಂತೆ ಈ ಬಾರಿ ಬರುವ ಯಾವುದೇ ಮುನ್ಸೂಚನೆ ಸದ್ಯಕ್ಕಿಲ್ಲ. ಮಹಾರಾಷ್ಟ್ರ ಮತ್ತು ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕುಂಠಿತಗೊಂಡರೆ ನದಿ ತೀರದ ಗ್ರಾಮಗಳ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ