ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ದೇಶದ್ಯಾಂತ ಲಾಕ್ಡೌನ್ ಮಾಡಲಾಗಿತ್ತು. ಲಾಕ್ಡೌನ್ ನಿಂದಾಗಿ ರಾಜ್ಯದಲ್ಲಿ ಅಲ್ಲ ಇಡೀ ದೇಶದ ರಾಜಕೀಯ ವಿದ್ಯಮಾನಗಳು ಸ್ತಬ್ಧವಾಗಿದ್ದವು. ಆದರೆ ಲಾಕ್ಡೌನ್ ಅನ್ಲಾಕ್ ಆಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಪುನಾರಂಭಗೊಂಡಿದೆ. ಸ್ಥಾನಮಾನದ ಲೆಕ್ಕಾಚಾರದಲ್ಲಿರುವ ಆಡಳಿತ ಪಕ್ಷದ ನಾಯಕರು ದೆಹಲಿ ದಂಡಯಾತ್ರೆ ಶುರು ಮಾಡಿದ್ದು ಹೈಕಮಾಂಡ್ ನಾಯಕರ ಮನ ಗೆಲಲ್ಲು ಪ್ರಯತ್ನ ಆರಂಭಿಸಿದ್ದಾರೆ.
ಅನ್ಲಾಕ್ ಬಳಿಕ ನಾಲ್ಕನೇ ಬಾರಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ದೆಹಲಿ ದಂಡಯಾತ್ರೆ ಮಾಡುತ್ತಿದ್ದಾರೆ. ಸರ್ಕಾರ ರಚನೆ ವೇಳೆ ಕೊಟ್ಡ ಮಾತಿನಂತೆ ನನ್ನ ಡಿಸಿಎಂ ಮಾಡಿ ಎಂದು ಪಟ್ಟು ಹಿಡಿದಿದ್ದಾರಂತೆ. ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಜಾರಕಿಹೋಳಿ ಮನವಿ ಮಾಡಿದ್ದಾರೆ. ಇದೇ ವೇಳೆ ಜೊತೆಗಿದ್ದ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ತಮ್ಮ ಪಕ್ಷದ ಸೇವೆ ಆಧರಿಸಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಜೆ.ಪಿ ನಡ್ಡಾ ಜೊತೆಗೆ ರಾಜ್ಯದ ಕೇಂದ್ರ ಸಚಿವರನ್ನು ಉಭಯ ನಾಯಕರನ್ನು ಭೇಟಿ ಮಾಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ಬೆನ್ನಲ್ಲೇ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಕೂಡಾ ದೆಹಲಿಗೆ ಆಗಮಿಸಿದ್ದಾರೆ. ಇಂದು ಅವರು ಕೂಡಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಶೀಘ್ರದಲ್ಲಿ ಸಂಪುಟ ವಿಸ್ತರಣೆ ಅಥಾವ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ತಮ್ಮನ್ನ ಸಚಿವ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವಾರಗಳ ಹಿಂದಷ್ಟೇ ಡಿಸಿಎಂ ಲಕ್ಷಣ್ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ದೆಹಲಿ ಭೇಟಿ ನೀಡಿ ಹೈಕಮಾಂಡ್ ಭೇಟಿಯಾಗಿದ್ದರು. ಕೊರೊನಾ ಕೆಲಸಗಳ ಒತ್ತಡದಲ್ಲಿರುವ ಕಾರಣ ಗೃಹ ಸಚಿವ ಅಮಿತ್ ಶಾ ಯಾವ ನಾಯಕರು ಈವರೆಗೂ ಸಮಯ ನೀಡಿಲ್ಲ. ಹೀಗಾಗಿ ಅಮಿತ್ ಶಾ ನಂತರದ ನಾಯಕರ ಭೇಟಿ ಮಾಡಿ ಮನವೊಲಿಸುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.
ಕೊರೊನಾ ಸಂಕಷ್ಟದ ನಡುವೆ ಆಡಳಿತ ಪಕ್ಷದ ನಾಯಕರ ಪೈಕಿ ಹಲವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೇ ಇನ್ನು ಕೆಲವರು ಇರೋ ಸಚಿವ ಸ್ಥಾನದಲ್ಲಿ ಮುಂದುವರಿಸಲು ಮನವಿ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೋಳಿ ಮಾತ್ರ ಇನ್ನು ಹೆಚ್ಚಿನ ಸ್ಥಾನಮಾನ ನಿರೀಕ್ಷೆಯಲ್ಲಿದ್ದು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ