ಲಕ್ನೋ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ 11 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಕೌಶಂಬಿ ಜಿಲ್ಲಾಧಾಕಾರಿ ಅಮಿತ್ ಕುಮಾರ್ ಪಾಲ್ ಅವರು ಮಾಹಿತಿ ನೀಡಿದ್ದಾರೆ. ಸ್ಫೋಟದತೀವ್ರತೆಗೆ ಇಡೀ ಕಾರ್ಖಾನೆ ಸಂಪೂರ್ಣವಾಗಿ ನೆಲಸಮವಾಗಿದೆ. ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ನಾಲ್ಕು ಗಂಟೆಗಳಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಐಜಿ ಮತ್ತು ಡಿಐಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಮತ್ತೊಂದೆಡೆ, ಕುಟುಂಬಸ್ಥರು ತಮ್ಮ ಪ್ರೀತಿಪಾತ್ರರ ಮಾಹಿತಿಗಾಗಿ ಆತಂಕದಿಂದ ಕಾಯುತ್ತಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಭಯೋತ್ಪಾದನಾ ನಿಗ್ರಹ ದಳವು ಸಹ ಸ್ಥಳಕ್ಕೆ ಆಗಮಿಸಿದ್ದು, ಸ್ಫೋಟಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಸಾವುನೋವುಗಳು ಮತ್ತು ಗಾಯಗೊಂಡವರ ಅಂತಿಮ ಸಂಖ್ಯೆಯನ್ನು ಖಚಿತಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಶಂಬಿಯ ಪುರಮುಫ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೌರಿ ಪ್ರದೇಶದಲ್ಲಿ ಈ ಪಟಾಕಿ ಕಾರ್ಖಾನೆಯಿದೆ. ಸ್ಫೋಟ ಸಂಭವಿಸಿದಾಗ ಕಾರ್ಖಾನೆಯಲ್ಲಿ ಸುಮಾರು 25 ಕಾರ್ಮಿಕರಿದ್ದರು. ಸದ್ಯ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಮತ್ತು ಸಿಲುಕಿಕೊಂಡಿರುವವರನ್ನು ಪತ್ತೆಹಚ್ಚಲು ತಂಡಗಳು ಕೆಲಸ ಮಾಡುತ್ತಿವೆ.
50 ಮೀಟರ್ ವ್ಯಾಪ್ತಿಯಲ್ಲಿದ್ದ ಮನೆಗಳಿಗೆ ಹಾನಿ
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಪಟಾಕಿ ಕಾರ್ಖಾನೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಇದರ ಪ್ರಭಾವವು ಸುತ್ತಮುತ್ತಲಿನ ಪ್ರದೇಶದಲ್ಲೂ ಕಂಡುಬಂದಿದ್ದು, ಕಾರ್ಖಾನೆಯ ಸುತ್ತಲಿನ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿರುವ 5 ರಿಂದ 7 ಮನೆಗಳು ಹಾನಿಗೊಳಗಾಗಿವೆ. ಸ್ಫೋಟದ ಶಬ್ದವು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಕೇಳಿಸಿದೆ. ಕಾರ್ಖಾನೆ ಸ್ಫೋಟಗೊಂಡ ಕೂಡಲೇ ಆಕಾಶಕ್ಕೆ ಹೊಗೆ ಚಿಮ್ಮುತ್ತಿರುವ ಕಂಡುಬಂದಿದೆ.
Laxmi News 24×7