ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊರೆ ಅನುಭವಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಸರ್ಕಾರ ನೀಡಿದ ಗ್ಯಾರಂಟಿ ಗೀವ್ ಅಪ್ (ಯೋಜನೆ ತ್ಯಾಗ) ಕರೆಗೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಬಿಟ್ಟುಕೊಟ್ಟಿದ್ದಾರೆ.
ಗೃಹಜ್ಯೋತಿ ರೀ-ಸರ್ವೆ (ಮರು ಪರಿಶೀಲನೆ) ವೇಳೆ ಯೋಜನೆಯ ಲಾಭ ತಮಗೆ ಬೇಡವೆಂದು ಸಾರ್ವಜನಿಕರೇ ಮುಂದೆ ಬಂದು ತ್ಯಾಗ ಮಾಡುತ್ತಿದ್ದಾರೆ. ಗೀವ್ಅಪ್ ಅಭಿಯಾನಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ-ಮನೆ ಪರಿಶೀಲನಾ ಕಾರ್ಯವನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದ್ದಾರೆ
ಸರ್ಕಾರಕ್ಕೆ ಉಳಿತಾಯ ಹೇಗೆ?
150 ಯೂನಿಟ್ ಲೆಕ್ಕಾಚಾರದಲ್ಲಿ ಪ್ರತಿ ತಿಂಗಳಿಗೆ ಅಂದಾಜು 1,500 ರೂ. ಉಳಿತಾಯವಾಗಲಿದೆ. ಇದರಿಂದ ಸುಮಾರು 42 ಕೋಟಿ ಉಳಿತಾಯವಾಗಲಿದ್ದು ಸರ್ಕಾರಕ್ಕೆ ವರ್ಷಕ್ಕೆ ಸರಿಸುಮಾರು 500 ಕೋಟಿ ರೂ. ಹೊರೆ ತಗ್ಗಲಿದೆ.
ಗೃಹಜ್ಯೋತಿಯ ಯಶಸ್ಸಿನ ಬೆನ್ನಲ್ಲೇ, ‘ಗೃಹಲಕ್ಷ್ಮಿ’ ಯೋಜನೆಗೂ ರೀ-ಸರ್ವೆ ನಡೆಸಲು ಸರ್ಕಾರ ಸಜ್ಜಾಗಿದ್ದು, ನಾಳೆಯಿಂದ ಇದಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಿ ಪಟ್ಟಿಯಿಂದ ಕೈಬಿಡಲಾಗುತ್ತದೆ.
ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಸ್ವಯಂಪ್ರೇರಿತರಾಗಿ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಬಿಟ್ಟುಕೊಡಲು ಅವಕಾಶ ಕಲ್ಪಿಸಲಾಗಿದೆ. ಗೃಹಜ್ಯೋತಿಯಂತೆಯೇ ಲಕ್ಷಾಂತರ ಅನರ್ಹರು ಹೊರಬೀಳುವ ಜೊತೆಗೆ ಸ್ಥಿತಿವಂತರೂ ಗೃಹಲಕ್ಷ್ಮಿ ಯೋಜನೆಯನ್ನು ತ್ಯಾಗ ಮಾಡುವ ನಿರೀಕ್ಷೆಯಲ್ಲಿದ್ದು, ಇದರಿಂದಲೂ ಸರ್ಕಾರಕ್ಕೆ ದೊಡ್ಡ ಮಟ್ಟದ ಹಣ ಉಳಿತಾಯವಾಗುವ ಸಾಧ್ಯತೆಯಿದೆ.
Laxmi News 24×7