ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನೆತ್ತರು ಹರಿದಿದೆ. ಜೊತೆಯಲ್ಲೇ ಇದ್ದು, ಒಟ್ಟಿಗೆ ಅಡ್ಡಾಡುತ್ತಿದ್ದ ಸ್ನೇಹಿತರೇ ಸೇರಿ ಸ್ವಂತ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ದುರ್ದೈವಿ. ಮಹೇಶ್ ಮತ್ತು ಈ ಕೃತ್ಯ ಎಸಗಿದ ಯುವಕರೆಲ್ಲರೂ ಒಂದೇ ಸ್ನೇಹ ಬಳಗದವರಾಗಿದ್ದರು. ಆದರೆ, ಮಹೇಶ್ ತನ್ನದೇ ಗ್ಯಾಂಗ್ನಲ್ಲಿದ್ದ ಸ್ನೇಹಿತನೊಬ್ಬನ ಅಕ್ಕನಿಗೆ ಮೊಬೈಲ್ನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದು ಆಕ್ರೋಶಗೊಂಡ ಸ್ನೇಹಿತ, ತನ್ನ ಇತರ ಗೆಳೆಯರೊಂದಿಗೆ ಸೇರಿ ಮಹೇಶ್ನನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ.
ಮನೆಯಿಂದ ಕರೆತಂದು ಮರ್ಡರ್!
ಯೋಜನೆಯಂತೆ ನಾಲ್ಕೈದು ಜನ ಸ್ನೇಹಿತರ ತಂಡ ಮಹೇಶ್ನನ್ನು ಆತನ ಮನೆಯಿಂದ ಹೊರಗೆ ಕರೆತಂದಿದೆ. ಮಾತಿಗೆ ಮಾತು ಬೆಳೆದು, ಆಕ್ರೋಶದ ಕೈಯಲ್ಲಿ ಬುದ್ಧಿ ಅಡವಿಟ್ಟ ಸ್ನೇಹಿತರು, ತಾವೇ ತಂದಿದ್ದ ಚಾಕುವಿನಿಂದ ಮಹೇಶ್ಗೆ ಮನಬಂದಂತೆ ಇರಿದು ಸ್ಥಳದಲ್ಲೇ ಆತನ ಪ್ರಾಣ ಪಕ್ಷಿ ಹಾರಿಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ – ಓರ್ವ ವಶಕ್ಕೆ
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಹಾಗೂ ಪ್ರಾಥಮಿಕ ತನಿಖೆ ಆಧಾರದ ಮೇಲೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಹಂತಕರಿಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸ್ನೇಹಿತರೇ ಸೇರಿ ಗೆಳೆಯನನ್ನು ಇರಿದು ಇರಿದು ಕೊಂದ ಈ ಘಟನೆ ಮಳವಳ್ಳಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ.
Laxmi News 24×7