ಮಂಡ್ಯ: ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಆರಂಭದಲ್ಲೇ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಇದರ ಬೆನ್ನಲ್ಲೇ ಬರದ ಆತಂಕದಲ್ಲಿರೋ ಮಂಡ್ಯ ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಮತ್ತೊಂದು ಬಿಗ್ ಶಾಕ್ ನೀಡಿದೆ.
ಕೃಷ್ಣರಾಜಸಾಗರ ಜಲಾಶಯ ನಾಡಿಗೆ ನೀರುಣಿಸುವ ಡ್ಯಾಂ. ಮಂಡ್ಯ, ಮೈಸೂರು ಕೊಡಗು ಭಾಗದ ರೈತರನ್ನು ಕಾಪಾಡುವ ಜೀವನದಿ. ಬೆಂಗಳೂರಿಗರು ಕುಡಿಯುವ ಹನಿ ಹನಿ ನೀರು ಕೂಡ ಇದೇ ಡ್ಯಾಂನಿಂದ ಬರೋದು. ಜೀವನದಿ ಎಂಬ ಕಾವೇರಿ ಈಗ ಜೀವಕಳೆ ಕಳೆದುಕೊಂಡಿದ್ದಾಳೆ. ಮುಂಗಾರು ಮಳೆ ಆರಂಭದಲ್ಲಿಯೇ ನಿರಾಸೆ ಉಂಟುಮಾಡಿದೆ. ಇದರ ಮಧ್ಯೆಯೇ ಬರದ ಆತಂಕದಲ್ಲಿರುವ ಮಂಡ್ಯ, ಮೈಸೂರು ಜಿಲ್ಲೆ ರೈತರಿಗೆ ಈಗ ಜಿಲ್ಲಾಡಳಿತ ನಿರ್ಧಾರದಿಂದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಕೆಆರ್ಎಸ್ ಅಣೆಕಟ್ಟಿನಲ್ಲಿ ಈಗ ಉಳಿದಿರೋದು ಕೇವಲ 11 ಟಿಎಂಸಿ ನೀರು. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೆಜ್. ಬಳಕೆಗೆ ಸಿಗೋದು ಕೇವಲ 6 ಟಿಎಂಸಿ ನೀರು. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ಜಿಲ್ಲಾಡಳಿತ ಮುಂದಿನ 3 ತಿಂಗಳು ಕುಡಿಯುವ ನೀರಿನ ನಿರ್ವಹಣೆಗಾಗಿ ನಿರ್ಧಾರಕ್ಕೆ ಬಂದಿದೆ. ಹೀಗಾಗಿ 3 ತಿಂಗಳು ರೈತರ ಬೆಳೆಗೆ ಕಾವೇರಿ ನೀರು ಸಿಗೋದು ಬಹುತೇಕ ಡೌಟ್.
ಮೂರು ಜಿಲ್ಲೆಯ ರೈತರು ಬಹುತೇಕ ಕಾವೇರಿ ನದಿ ನೀರನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಕಾವೇರಿ ನೀರು ನಾಲೆಗೆ ಹರಿಯದಿದ್ದರೆ, ಮಂಡ್ಯ ಮೈಸೂರು ಭಾಗದ ಭೂಮಿಗಳು ಹಸಿರನ್ನು ಕಳೆದುಕೊಳ್ಳುತ್ತವೆ. ಈಗಾಗಲೇ ಮುಂಗಾರು ಆರಂಭದಲ್ಲಿಯೇ ಕೈಕೊಟ್ಟಿದೆ. ಈಗ ನಾಲೆಗೆ ನೀರು ಹರಿಸುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದ್ದು ರೈತರು ಪರದಾಡುವಂತಾಗಿದೆ.
ಅತ್ತ ಮಳೆಯೂ ಇಲ್ಲದೆ, ಇತ್ತ ಡ್ಯಾಂನಿಂದ ನೀರು ಇಲ್ಲದೇ ಬೆಳೆದು ನಿಂತುವ ಕಬ್ಬು ಒಣಗುತ್ತಿದೆ. ಸದ್ಯಕ್ಕೆ ವರುಣದೇವ ಕರುಣೆ ತೋರದಿದ್ದರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಶೀಘ್ರವೇ ಮಳೆರಾಯ ಕೃಪೆ ತೋರಿ ಕೆಆರ್ಎಸ್ ಭರ್ತಿಯಾಗಲಿ ಅನ್ನೋದೇ ಈಗ ರೈತರ ಪ್ರಾರ್ಥನೆಯಾಗಿದೆ.
Laxmi News 24×7