Breaking News

ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲು

Spread the love

ಹಾಸನ: ಮಲೆನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿಯೇ ಈ ಬಾರಿ ಮಳೆಯ ಕೊರತೆ ಆಗಿದ್ದು, ಐದಾರು ಜಿಲ್ಲೆಗಳಿಗೆ ನೀರು ಒದಗಿಸುವ ಹೇಮಾವತಿ ಒಡಲು ಬರಿದಾಗುತ್ತಿದೆ. ಹೀಗಾಗಿ ಇದೇ ನೀರನ್ನು ನಂಬಿ ಬದುಕುತ್ತಿರುವವರಲ್ಲಿ ಆತಂಕ ಹೆಚ್ಚಿದ್ದು, ಮಳೆ ಬಂದರೆ ಸಾಕಪ್ಪ ಎನ್ನುವಂತಾಗಿದೆ. ಜಿಲ್ಲೆಯ ಸಕಲೇಶಫುರ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆ ಸುರಿದರೆ ತುಂಬಿ ಹರಿಯುತ್ತಿದ್ದ ಹೇಮಾವತಿ ನದಿ, ಜಲಾಶಯಕ್ಕೆ ನೀರು ತುಂಬಿಸುತ್ತಿತ್ತು. ಆದರೆ ಈ ವರ್ಷ ಮುಂಗಾರು ಮಳೆಯ ತೀವ್ರ ಕೊರತೆ ಬರದ ಛಾಯೆ ಮೂಡಿಸಿದೆ.

37 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಈಗ ಕೇವಲ 14 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಇದರಲ್ಲಿ ಬಳಕೆಗೆ ಯೋಗ್ಯ ನೀರು ಕೇವಲ 10 ಟಿಎಂಸಿ ಮಾತ್ರವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಬರೊಬ್ಬರಿ 25 ಟಿಎಂಸಿ ನೀರಿತ್ತು 21 ಟಿಎಂಸಿ ನೀರು ಬಳಕೆಗೆ ಸಿಗುವಂತಿತ್ತು. ಹಾಸನ ಜಿಲ್ಲೆಯ ಹಲವು ತಾಲೂಕುಗಳಿಗೆ ಕುಡಿಯುವ ನೀರಿನ ಮೂಲ ಇದೇ ಜಲಾಶಯವಾಗಿದೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಲಕ್ಷಾಂತರ ರೈತರ ತುತ್ತಿನ ಚೀಲಕ್ಕೆ ಆಸರೆಯಾಗಿರುವ ಹೇಮಾವತಿ ಜಲಾಶಯ ಈ ವರ್ಷ ಖಾಲಿ ಖಾಲಿಯಾಗಿದ್ದು, ಪರಿಸ್ಥಿತಿ ಹೀಗೆಯೇ ಇದ್ದರೆ ಮುಂದೇನೆಂಬ ಪ್ರಶ್ನೆ ಉದ್ಭವಿಸಿದೆ.

ಒಂದೆಡೆ ಮಳೆ ಕೈಕೊಟ್ಟಿದ್ದರೆ ಇತ್ತ ಡ್ಯಾಂ ಕೂಡ ಬರಿದಾಗುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಹದಿನೈದು ದಿನಗಳ ಹಿಂದೆ ಸುರಿದ ಅಲ್ಪ ಮಳೆಯನ್ನೇ ನಂಬಿ ಬಿತ್ತನೆಮಾಡಿದ್ದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಬೋರ್​​ವೆಲ್​​ಗಳತ್ತ ಮುಖ ಮಾಡಿದ್ದರೂ, ಬಿರು ಬೇಸಿಗೆಯನ್ನೂ ನಾಚಿಸುವಂತೆ ನೆತ್ತಿ ಸುಡುತ್ತಿರುವ ಸೂರ್ಯನ ತಾಪಕ್ಕೆ ಬೆಳೆ ನೆಲಕಚ್ಚುತ್ತಿದೆ. ಕಳೆದ ವರ್ಷ ಅತಿಯಾದ ಮಳೆ ಸುರಿದು ಬೆಳೆ ನೀರುಪಾಲಾಗಿದ್ದರೆ, ಈ ವರ್ಷ ಮಳೆಯೇ ಇಲ್ಲದಿರೋದು ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದ ರೈತರ ನಿದ್ದೆ ಕಸಿದಿದೆ.


Spread the love

About Laxminews 24x7

Check Also

ಜಿಮ್‌ ಮುಗಿಸಿಕೊಂಡು ಮನೆಗೆ ಬಂದಿದ್ದೇ ತಡ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು

Spread the loveದಾವಣಗೆರೆ: ಜಿಮ್‌ ಮುಗಿಸಿಕೊಂಡು ಮನೆಗೆ ಬಂದಿದ್ದೇ ತಡ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ (Davanagere) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ