ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನದ ಮೂಲಕ ಜನರಲ್ಲಿ ನಡುಕ ಹುಟ್ಟಿಸಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಬೆಟಗೇರಿ ವೃತ್ತದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇತೃತ್ವದ ತಂಡ ನಡೆಸಿದ ಈ ಬೃಹತ್ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಅಂತರರಾಜ್ಯ ತಂಡವನ್ನು ಬೆಟಗೇರಿ ವೃತ್ತದ ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಮಟ್ಟಹಾಕಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ನೇತೃತ್ವದ ತಂಡವು ಹನ್ನೊಂದು ಮಂದಿ ಖತರ್ನಾಕ್ ಕಳ್ಳರನ್ನು ಬಂಧಿಸಿ, ಅವರಿಂದ ಬರೋಬ್ಬರಿ ಒಂದು ಕೋಟಿ ಇಪ್ಪತ್ತಾರು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ. ಈ ತಂಡವು ಗದಗ, ಬೆಳಗಾವಿ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿತ್ತು. ಸಿಪಿಐ ಧೀರಜ್ ಸಿಂಧೆ ಹಾಗೂ ಪಿಎಸ್ಐಗಳಾದ ಮಾರುತಿ ಜೋಗದಂಡಕರ ಮತ್ತು ಲಕ್ಷ್ಮಪ್ಪ ಆರಿ ಅವರ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಕಳ್ಳತನಕ್ಕೆ ಬಳಸುತ್ತಿದ್ದ ಕಾರು ಮತ್ತು ಬೈಕುಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಈ ಬೃಹತ್ ಕಾರ್ಯಾಚರಣೆಯಲ್ಲಿ ಬಂಧಿತರಾದ ಆರೋಪಿಗಳ ವಿವರ ಇಂತಿದೆ: ಸಣ್ಣಸುರೇಶ ಸತ್ಯವ್ವ ಸಿಂಗನೂರ, ಅಳ್ಳಾವರದ ನಾಗಪ್ಪ ತಿಮ್ಮಪ್ಪ ದುರಗಮುರಗಿ, ಗರಗದ ಶಿವು ಸುಂಕಪ್ಪ ಬೆಳಗಂಟಿ, ಹುಕ್ಕೇರಿಯ ದೊಡ್ಡಸುರೇಶ ಬಾಬು ತಮ್ಮಣ್ಣವರ, ವೆಂಕಟಾಪೂರದ ಕುಡ್ಡ ಶಂಕರ ಯಲ್ಲಪ್ಪ ಕರಿ, ಧಾರವಾಡದ ಮಂಜುನಾಥ ನಾಗರಾಜ ಲಾದಗಿ, ಹಾನಗಲ್ನ ಹುಲಗಪ್ಪ ಫಕ್ಕೀರಪ್ಪ ಬೆಳಗಾಲಪೇಟೆ, ಮುನವಳ್ಳಿಯ ಆನಂದ ದುರಗಪ್ಪ ಯರಗಣ್ಣವರ, ಕಲಬುರ್ಗಿಯ ಗಂಗಾರಾಮ ಬೈರಾಮ ಚವ್ಹಾಣ, ಕನೀರಾಮ ಕಮಸರ ಚವ್ಹಾಣ ಮತ್ತು ಮಹಾರಾಷ್ಟ್ರದ ಶ್ರೀಕಾಂತ ಶರಣಪ್ಪ ದೂಧಳೆ. ಈ ಆರೋಪಿಗಳ ಬಂಧನದಿಂದಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಯ ಸುಮಾರು ಹದಿನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಇತ್ಯರ್ಥಗೊಂಡಂತಾಗಿದ್ದು, ಇಡೀ ಪೊಲೀಸ್ ತಂಡದ ಶ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Laxmi News 24×7